ADVERTISEMENT

ಪತ್ನಿ ಕೊಂದು ಧರ್ಮಸ್ಥಳದಲ್ಲಿ ಮುಡಿ ಕೊಟ್ಟಿದ್ದವನ ಬಂಧನ

ಅನ್ನಪೂರ್ಣೇಶ್ವರಿನಗರ ಪೊಲೀಸರಿಂದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 22:27 IST
Last Updated 25 ಸೆಪ್ಟೆಂಬರ್ 2021, 22:27 IST
ಕಾಂತರಾಜು
ಕಾಂತರಾಜು   

ಬೆಂಗಳೂರು: ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೂಪಾ (34) ಎಂಬುವರ ಕೊಲೆ ಪ್ರಕರಣ ಸಂಬಂಧ, ಅವರ ಪತಿ ಕಾಂತರಾಜುನನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಕಾಂತರಾಜು, ಫೈನಾನ್ಸ್ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ. ಶೀಲ ಶಂಕಿಸಿ ರೂಪಾ ಅವರನ್ನು ಸೆ. 22ರಂದು ಕೊಲೆ ಮಾಡಿ ಪರಾರಿಯಾಗಿದ್ದ. ಧರ್ಮಸ್ಥಳಕ್ಕೆ ಹೋಗಿದ್ದ ಆರೋಪಿ, ಅಲ್ಲಿ ತನ್ನ ಮುಡಿ ಅರ್ಪಿಸಿದ್ದ. ನಂತರ, ಹಲವು ಪುಣ್ಯ ಕ್ಷೇತ್ರಗಳಿಗೆ ಸುತ್ತಾಡಿದ್ದ’ ಎಂದು ಪೊಲೀಸರು ಹೇಳಿದರು.

‘ಇತ್ತೀಚೆಗೆ ಸಂಬಂಧಿಕರ ಮನೆಗೆ ಆರೋಪಿ ಹೋಗಿದ್ದ. ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ರೂಪಾ ಮೊಬೈಲ್‌ನಲ್ಲಿ ಮಾತನಾಡುವಾಗ ಹಾಗೂ ಹೊರಗಡೆ ಹೋಗುವಾಗ ಆರೋಪಿ ಅನುಮಾನದಿಂದ ನೋಡುತ್ತಿದ್ದ. ಅದೇ ವಿಚಾರವಾಗಿ ಪತ್ನಿ ಜೊತೆ ಜಗಳ ಮಾಡುತ್ತಿದ್ದ. ಪತ್ನಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದ ಆರೋಪಿ, ಎರಡು ಬಾರಿ ಸಂಚು ರೂಪಿಸಿದ್ದ.’

‘ಪ್ರವಾಸದ ನೆಪದಲ್ಲಿ ಕರಾವಳಿಗೆ ಕರೆದೊಯ್ದು, ಎತ್ತರದ ಪ್ರದೇಶದಿಂದ ಪತ್ನಿಯನ್ನು ತಳ್ಳಿ ಕೊಲೆ ಮಾಡಲು ಮುಂದಾಗಿದ್ದ. ಆದರೆ, ಅದು ಸಾಧ್ಯವಾಗಿರಲಿಲ್ಲ. ರಸ್ತೆಯಲ್ಲಿ ಕಾರು ಗುದ್ದಿಸಿ ಕೊಲೆ ಮಾಡುವ ಸಂಚು ಸಹ ವಿಫಲವಾಗಿತ್ತು. ಕೊನೆಯದಾಗಿ, ಸೆ. 22ರಂದು ಮನೆಯಲ್ಲೇ ಚಾಕುವಿನಿಂದ ಕತ್ತು ಕೊಯ್ದು ಪತ್ನಿಯನ್ನು ಕೊಂದಿದ್ದ’ ಎಂದೂ ಪೊಲೀಸರು ತಿಳಿಸಿದರು.

ಜೈಲಿಗೂ ಹೋಗಿ ಬಂದಿದ್ದ; ‘2005ರಲ್ಲಿ ವ್ಯಕ್ತಿ ಕೊಲೆ ಪ್ರಕರಣದಲ್ಲಿ ಕಾಂತರಾಜು, ಜೈಲಿಗೂ ಹೋಗಿ ಜಾಮೀನು ಪಡೆದು ಹೊರಬಂದಿದ್ದ. ಪತ್ನಿ ರೂಪಾ ಅವರನ್ನು ಕೊಂದ ನಂತರ, ಅವರ ತಂಗಿಯ ಗಂಡನನ್ನೂ ಕೊಲ್ಲಲು ಕಾಂತರಾಜು ಸಂಚು ರೂಪಿಸಿದ್ದ. ಅಷ್ಟರಲ್ಲೇ ಆತ ನಮಗೆ ಸಿಕ್ಕಿಬಿದ್ದ’ ಎಂದೂ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.