ADVERTISEMENT

₹ 20 ಸಾವಿರ ಕೊಡುವಂತೆ ಬೆದರಿಸಿದ್ದಕ್ಕೆ ಕೊಲೆ: 11 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 21:35 IST
Last Updated 31 ಡಿಸೆಂಬರ್ 2019, 21:35 IST

ಬೆಂಗಳೂರು: ಶ್ರೀರಾಮಪುರ ಠಾಣೆ ವ್ಯಾಪ್ತಿಯ ಲಕ್ಷ್ಮೀನಾರಾಯಣಪುರ ಬಸ್ ತಂಗುದಾಣ ಸಮೀಪದಲ್ಲಿ ಡಿ. 26ರಂದು ನಡೆದಿದ್ದ ಮಂಜುನಾಥ್ (25) ಎಂಬುವವರ ಕೊಲೆ ಸಂಬಂಧ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕಾಶನಗರದ ಮಂಜುನಾಥ್ ಅಲಿಯಾಸ್ ಟೆಂಟ್ ಮಂಜ (23), ರೋಷನ್ ಅಲಿಯಾಸ್ ರಾಕೇಶ್, ಹರಿಕೃಷ್ಣ, ವಿಜಯನಗರದ ಮಹೇಂದ್ರ, ಜಗಜೀವನರಾಮ್ ನಗರದ ಸಂಜಯ್, ಮರಿಯಪ್ಪನ ಪಾಳ್ಯದ ವಿಜಯ್ ಅಲಿಯಾಸ್ ಗುಬ್ಬಿ, ಜೀವ, ಶ್ರೀರಾಮಪುರದ ಆರ್‌. ಅಖಿಲೇಶ್, ಎಲ್‌.ಎನ್‌.ಪುರದ ವಿಘ್ನೇಶ್, ಕಮಲಾನಗರದ ದೀಪಕ್ ಅಲಿಯಾಸ್ ಸ್ಟೀಫನ್ ಹಾಗೂ ತಿಲಕ್‌ ಬಂಧಿತರು.

‘ಆರೋಪಿಗಳೆಲ್ಲರೂ ಮೃತ ಮಂಜುನಾಥ್ ಸ್ನೇಹಿತರು. ಆರೋಪಿ ತಿಲಕ್‌ ಕೆಲವು ದಿನಗಳ ಹಿಂದಷ್ಟೇ ಬೈಕ್‌ನಲ್ಲಿ ಹೊರಟಿದ್ದ. ಆತನನ್ನು ತಡೆದಿದ್ದ ಮಂಜುನಾಥ್, ಬೈಕ್ ಕಸಿದುಕೊಂಡಿದ್ದರು. ₹ 20 ಸಾವಿರ ಹಣ ಕೊಡುವಂತೆ ಬೆದರಿಸಿ ಕಳುಹಿಸಿದ್ದರು. ಕೋಪಗೊಂಡ ತಿಲಕ್‌ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿದ್ದ. ನಂತರ, ಎಲ್ಲರೂ ಗುಂಪು ಕಟ್ಟಿಕೊಂಡು ಮಂಜುನಾಥ್ ಅವರನ್ನು ಕೊಲೆ ಮಾಡಿದ್ದರು’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

ADVERTISEMENT

‘ಮಂಜುನಾಥ್ ಮನೆಯಲ್ಲಿರುವಾಗಲೇ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವದಿಂದ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.