ADVERTISEMENT

ವೃದ್ಧೆ ಕೊಂದು ಚಿನ್ನಾಭರಣ ಸುಲಿಗೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 16:27 IST
Last Updated 3 ಸೆಪ್ಟೆಂಬರ್ 2020, 16:27 IST

ಬೆಂಗಳೂರು: ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಕಾಂತಮ್ಮ (70) ಎಂಬುವರನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು, ಮನೆಯಲ್ಲಿದ್ದ ಚಿನ್ನಾಭರಣ ಸುಲಿಗೆ ಮಾಡಿ ಪರಾರಿಯಾಗಿದ್ದಾರೆ.

‘ರಾಮಸ್ವಾಮಿಪಾಳ್ಯದ ಕಾಂತಮ್ಮ ಅವರಿಗೆ ಐವರು ಮಕ್ಕಳಿದ್ದಾರೆ. ಅದರಲ್ಲಿ ನಾಲ್ವರು ಪ್ರತ್ಯೇಕವಾಗಿ ವಾಸವಿದ್ದಾರೆ. ಮಾನಸಿಕ ಅಸ್ವಸ್ಥೆಯಾಗಿರುವ ಮಗಳ ಜೊತೆಯಲ್ಲಿ ಕಾಂತಮ್ಮ ನೆಲೆಸಿದ್ದರು’ ಎಂದು ಪೊಲೀಸರು ಹೇಳಿದರು.

‘ಕಾಂತಮ್ಮ ಅವರಿಗೆ ಸ್ವಂತ ಮನೆಗಳಿದ್ದು, ಅವುಗಳನ್ನು ಬಾಡಿಗೆ ನೀಡಿದ್ದರು. ಅದರಿಂದ ತಿಂಗಳಿಗೆ ₹20 ಸಾವಿರ ಬಾಡಿಗೆ ಬರುತ್ತಿತ್ತು’ ಎಂದೂ ತಿಳಿಸಿದರು.

ADVERTISEMENT

‘ಪರಿಚಯಸ್ಥ ಮಹಿಳೆಯೊಬ್ಬರು ಬುಧವಾರ ಮಧ್ಯಾಹ್ನ ಮನೆಗೆ ಬಂದಿದ್ದರು. ಜನಧನ್ ಖಾತೆ ಮಾಡಿಸುವುದಾಗಿ ಹೇಳಿ ಮಗಳನ್ನು ಹೊರಗಡೆ ಕರೆದೊಯ್ದಿದ್ದಳು. ಅದಾದ ನಂತರ ದುಷ್ಕರ್ಮಿಗಳು ಮನೆಗೆ ನುಗ್ಗಿ, ವೃದ್ಧೆಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಮೈ ಮೇಲಿನ ಚಿನ್ನಾಭರಣಗಳನ್ನೂ ಕಿತ್ತುಕೊಂಡು ಪರಾರಿಯಾಗಿದ್ದಾರೆ’ ಎಂದೂ ಪೊಲೀಸರು ಹೇಳಿದರು.

’ಅಸ್ವಸ್ಥ ಪುತ್ರಿ ಸಂಜೆ ಮನೆಗೆ ಬಂದಾಗ ತಾಯಿಯ ಮೃತದೇಹ ನೋಡಿ ಕಿರುಚಾಡಿದ್ದರು. ವಿಷಯ ಗೊತ್ತಾಗಿ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಪರಿಚಯಸ್ಥರೇ ಕೃತ್ಯ ಎಸಗಿರುವ ಅನುಮಾನವಿದೆ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.