ಬೆಂಗಳೂರು: ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಯಶೋದಮ್ಮ (75) ಅವರನ್ನು ಕೊಲೆ ಮಾಡಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.
‘ವಿದ್ಯಾಪೀಠ ವೃತ್ತ ಬಳಿಯ ವಿನಾಯಕ್ ನಗರ ನಿವಾಸಿ ಯಶೋದಮ್ಮ ಬಹುಮಹಡಿ ಕಟ್ಟಡದ ಮಾಲೀಕರಾಗಿದ್ದರು. ನೆಲಮಹಡಿಯ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಅವರು, ಮೊದಲ ಮಹಡಿಯಲ್ಲಿದ್ದ ಮನೆಗಳನ್ನು ಬಾಡಿಗೆಗೆ ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಶುಕ್ರವಾರ ರಾತ್ರಿ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಶನಿವಾರ ಬೆಳಿಗ್ಗೆ ಬಾಡಿಗೆದಾರರೊಬ್ಬರು ಯಶೋದಮ್ಮ ಅವರ ಮನೆಗೆ ಹೋಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯಶೋದಮ್ಮ ಅವರನ್ನು ಕಂಡು ಚೀರಾಡಿದ್ದರು. ಸ್ಥಳೀಯರು, ಯಶೋದಮ್ಮ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ತಪಾಸಣೆ ನಡೆಸಿದ್ದ ವೈದ್ಯರು, ಸ್ಥಳದಲ್ಲೇ ವೃದ್ಧೆ ಮೃತಪಟ್ಟಿರುವುದಾಗಿ ಹೇಳಿದ್ದರು.’
‘ಯಶೋದಮ್ಮ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಕೊಲೆ ಬಳಿಕ ಆರೋಪಿಗಳು ಚಿನ್ನಾಭರಣ ದೋಚಿಕೊಂಡು ಹೋಗಿರುವ ಮಾಹಿತಿ ಇದೆ. ತನಿಖೆಯಿಂದಲೇ ಕೊಲೆಗೆ ಕಾರಣ ತಿಳಿಯಬೇಕಿದೆ’ ಎಂದೂ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.