ಬೆಂಗಳೂರು: ಮದ್ಯ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತರ ನಡುವೆ ಆರಂಭಗೊಂಡ ಜಗಳದಲ್ಲಿ ಒಬ್ಬ ಕೊಲೆಯಾಗಿದ್ದು, ಇಬ್ಬರು ಆರೋಪಿಗಳನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.
ದೊಮ್ಮಲೂರು ಬಡಾವಣೆಯ ಎ.ಕೆ.ಕಾಲೊನಿ ನಿವಾಸಿ ಸ್ಟೀಫನ್ ಕೊಲೆಯಾದ ವ್ಯಕ್ತಿ. ಅದೇ ಬಡಾವಣೆಯ ಮನು (23) ಹಾಗೂ ನಾಗರಾಜ್ (54) ಬಂಧಿತರು.
ಹಲಸೂರು ಠಾಣೆಯ ವ್ಯಾಪ್ತಿಯ ಬಯಲು ರಂಗಮಂದಿರದ ಬಳಿ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಘಟನೆ ನಡೆದಿದ್ದ ಅಕ್ಕಪಕ್ಕದ ಸ್ಥಳಗಳಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಆರೋಪಿಗಳ ಚಲನವಲನ ಸೆರೆಯಾಗಿತ್ತು. ಇದನ್ನು ಆಧರಿಸಿ, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.
‘ಕೂಲಿ ಕೆಲಸ ಮಾಡಿಕೊಂಡಿದ್ದ ಸ್ಟೀಫನ್ ಹಾಗೂ ಆರೋಪಿಗಳು ಸ್ನೇಹಿತರು. ವಾರಕ್ಕೊಮ್ಮೆ ಒಟ್ಟಾಗಿ ಸೇರಿ ಮದ್ಯಪಾನ ಮಾಡುತ್ತಿದ್ದರು. ಕಳೆದ ಭಾನುವಾರ ರಾತ್ರಿಯೂ ದೊಮ್ಮಲೂರು ಬಯಲು ರಂಗಮಂದಿರದ ಬಳಿ ಮದ್ಯಪಾನ ಮಾಡಿದ್ದರು. ಸ್ಟೀಫನ್ ಮದ್ಯ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಈ ವೇಳೆ ಮೂವರ ನಡುವೆ ಜಗಳ ಶುರುವಾಗಿತ್ತು’.
‘ಅಮಲಿನಲ್ಲಿ ಸ್ಟೀಫನ್ ಮೇಲೆ ಇಬ್ಬರೂ ಹಲ್ಲೆ ನಡೆಸಿ, ಬಯಲು ರಂಗಮಂದಿರದ ಒಳಭಾಗದಲ್ಲಿರುವ ಕಾಲುವೆಗೆ ತಳ್ಳಿದ್ದರು. ಬಳಿಕ ಸಿಮೆಂಟ್ ಇಟ್ಟಿಗೆಗಳನ್ನು ಸ್ಟೀಫನ್ ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.