ADVERTISEMENT

ದೊರೆಸ್ವಾಮಿ, ಹೆಬ್ಬಾರ್‌ ಸಹಿತ ಆರು ಮಂದಿಗೆ ‘ನಮ್ಮ ಬೆಂಗಳೂರು’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 16:45 IST
Last Updated 19 ಸೆಪ್ಟೆಂಬರ್ 2020, 16:45 IST
   

ಬೆಂಗಳೂರು: ‘ನಮ್ಮ ಬೆಂಗಳೂರು’ ಪ್ರಶಸ್ತಿಯ11ನೇ ವರ್ಷದ ಪುರಸ್ಕೃತರ ಪಟ್ಟಿ ಪ್ರಕಟಿಸಲಾಗಿದ್ದು, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರಿಗೆ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಲಾಗಿದೆ. ವರ್ಷದ ಮಾಧ್ಯಮ ವ್ಯಕ್ತಿ ವಿಭಾಗದಲ್ಲಿ ‘ಪ್ರಜಾವಾಣಿ’ಯ ಮುಖ್ಯ ವರದಿಗಾರ ಮಂಜುನಾಥ ಹೆಬ್ಬಾರ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಬೆಂಗಳೂರನ್ನು ಉತ್ತಮ ನಗರವಾಗಿಸಿ, ಬದುಕಲು ಯೋಗ್ಯವಾಗಿಸುವ ನಿಟ್ಟಿನಲ್ಲಿ ಅನನ್ಯ ಕೊಡುಗೆ ನೀಡುತ್ತಿರುವವರನ್ನು ಗುರುತಿಸಿ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಈ ಪ್ರಶಸ್ತಿ ನೀಡುತ್ತದೆ. ಶನಿವಾರ ಸಂಜೆ ವರ್ಚುವಲ್‌ ರೂಪದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಉದಯೋನ್ಮುಖ ತಾರೆ ವಿಭಾಗದಲ್ಲಿ ಸಾಮಾಜಿಕ ಹಕ್ಕುಗಳು ಹಾಗೂ ಆರೋಗ್ಯ ಕ್ಷೇತ್ರದ ಕಾರ್ಯಕರ್ತ ಚೇತನ್‌ಗೌಡ, ವರ್ಷದ ಸರ್ಕಾರಿ ಅಧಿಕಾರಿ ವಿಭಾಗದಲ್ಲಿ ನಗರದ ವಿವಿಧ ಸರ್ಕಾರಿ ಪ್ರೌಢಶಾಲೆಗಳಲ್ಲಿ ಮುಖ್ಯಶಿಕ್ಷಕಿಯಾಗಿ ಕೆಲಸ ಮಾಡಿರುವ ಕುಮಾರಿ ಇಂದಿರಾ, ವರ್ಷದ ನಮ್ಮ ಬೆಂಗಳೂರಿಗರು ವಿಭಾಗದಲ್ಲಿ ಸಾಮಾಜಿಕ ಕಾರ್ಯಕರ್ತೆ, ಹಸಿರು ದಳ ಸಂಸ್ಥೆಯ ಸಹಸ್ಥಾಪಕಿ ನಳಿನಿ ಶೇಖರ್, ವರ್ಷದ ಸಾಮಾಜಿಕ ಉದ್ಯಮಿ ವಿಭಾಗದಲ್ಲಿ ‘ಸ್ಟೋನ್‌ ಸೂಪ್’‌ ಸಾಮಾಜಿಕ ಉದ್ಯಮದ ಸಹ ಸ್ಥಾಪಕಿ ಸ್ಮಿತಾ ಕುಲಕರ್ಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ADVERTISEMENT

ನೂರಾರು ಜನರ ಪೈಕಿ ಅಂತಿಮಸುತ್ತಿಗೆ 26 ಜನ ನಾಮನಿರ್ದೇಶನಗೊಂಡಿದ್ದರು. ಅಂತಿಮವಾಗಿ ಆರು ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ.

‘ನಮ್ಮ ಬೆಂಗಳೂರು’ ಪ್ರಶಸ್ತಿಗಳ ಬ್ರಾಂಡ್ ರಾಯಭಾರಿ, ನಟ ರಮೇಶ್ ಅರವಿಂದ್, ‘ಬೆಂಗಳೂರು ನನ್ನ ನಗರ ಮತ್ತು ಈ ನಗರದ ಏಳಿಗೆಗಾಗಿ ನಿಸ್ವಾರ್ಥವಾಗಿ ದುಡಿದ ಪ್ರತಿಯೊಬ್ಬರೂ ನನ್ನ ಹೀರೋಗಳು. ತೆರೆಯ ಮರೆಯಲ್ಲಿಯೇ ಇದ್ದು ಅಡೆತಡೆಗಳ ನಡುವೆಯೂ ನನ್ನ ನಗರವನ್ನು ಉತ್ತಮ ಸ್ಥಳವನ್ನಾಗಿ ಮಾಡುತ್ತಿರುವ ಅನಾಮಧೇಯ ಹೀರೋಗಳ ಹುಡುಕಾಟವೇ ಈ ಪ್ರಶಸ್ತಿ’ ಎಂದರು.

ಹಿರಿಯ ನಟಿ ಅರುಂಧತಿ ನಾಗ್, ‘ಇಂತಹ ಸಂಕಷ್ಟದ ಸಮಯದಲ್ಲಿಯೂ ನಿಸ್ವಾರ್ಥವಾಗಿ ಕೆಲಸ ಮಾಡುವವರನ್ನು ಪ್ರತಿಷ್ಠಾನ ಗುರುತಿಸುತ್ತಿರುವುದು ಹೊಸ ಭರವಸೆ ಮೂಡಿಸುತ್ತದೆ’ ಎಂದರು.

ತೀರ್ಪುಗಾರರ ಸಮಿತಿ ಅಧ್ಯಕ್ಷ ಪ್ರದೀಪ್ ಕರ್, ‘ಅಂತಿಮ ಸುತ್ತು ತಲುಪಿದ ಎಲ್ಲ 26 ಮಂದಿಯೂ ವಿಜಯಿಗಳೇ. ಅಂತಿಮ ವಿಜಯಿಗಳನ್ನು ಗುರುತಿಸುವುದು ಸಮಿತಿಗೆ ಸವಾಲಿನ ಕೆಲಸವಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.