ಬೆಂಗಳೂರು:'ನಮ್ಮ ಮೆಟ್ರೊ' ಹಸಿರು ಮಾರ್ಗದ ಆರ್.ವಿ. ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿ ನಿಲ್ದಾಣದವರೆಗೆ ಇದೇ ಶನಿವಾರ-ಭಾನುವಾರದಂದು ಒಂದು ತಾಸು ಮೊದಲೇ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.
ಎರಡನೇ ಹಂತದಲ್ಲಿನ ಯಲಚೇನಹಳ್ಳಿ- ಅಂಜನಾಪುರ ವಿಸ್ತರಿಸಿದ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮ ಹೇಳಿದೆ.
ಈ ನಿಲ್ದಾಣಗಳ ನಡುವೆ ಶನಿವಾರ- ಭಾನುವಾರ ರಾತ್ರಿ 8 ಗಂಟೆಗೆ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.
ಯಲಚೇನಹಳ್ಳಿ ನಿಲ್ದಾಣದಿಂದ ನಾಗಸಂದ್ರದವರೆಗೆ ಕೊನೆಯ ರೈಲು ಯಲಚೇನಹಳ್ಳಿಯಿಂದ ರಾತ್ರಿ 8ಕ್ಕೆ ಹೊರಡಲಿದೆ. ನಾಗಸಂದ್ರದಿಂದ ಕೊನೆಯ ರೈಲು ಸಂಜೆ 6.56ಕ್ಕೆ ಹೊರಡಲಿದೆ.
ಆದರೆ, ಆರ್.ವಿ. ರಸ್ತೆ ಮತ್ತು ನಾಗಸಂದ್ರ ಮೆಟ್ರೊ ನಿಲ್ದಾಣಗಳ ನಡುವೆ ಸೇವೆಯು ಎಂದಿನಂತೆ ರಾತ್ರಿ 9 ಗಂಟೆಯವರೆಗೆ ಲಭ್ಯವಿರುತ್ತದೆ. ಸೇವೆಯು ಎಂದಿನಂತೆ ಬೆಳಿಗ್ಗೆ 7 ಕ್ಕೆ ಪ್ರಾರಂಭವಾಗಲಿದೆ.
ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ನಿಲ್ದಾಣಗಳ ನಡುವೆ ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ನಿಗಮ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.