ಬೆಂಗಳೂರು: ‘ಪ್ರಜೆಗಳ ನೋವಿಗೆ ಸ್ಪಂದಿಸಲುರಾಜಕಾರಣಿಗಳು ಸೂಕ್ಷ್ಮ ಸಂವೇದನಾಶೀಲರಾಗಿರಬೇಕು. ಆದರೆ, ಅವರು ಅಕ್ಷರ ಶತ್ರುಗಳಾಗಿದ್ದಾರೆ. ನಮ್ಮೆಲ್ಲರ ಬವಣೆಗಳಿಗೆ ಇದೇ ಮೂಲ ಕಾರಣ’ ಎಂದು ವಿಮರ್ಶಕನರಹಳ್ಳಿ ಬಾಲಸುಬ್ರಹ್ಮಣ್ಯ ಬೇಸರ ವ್ಯಕ್ತಪಡಿಸಿದರು.
ಬಿ.ಎಂ.ಶ್ರೀ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೊ.ಎಲ್.ಎಸ್.ಶೇಷಗಿರಿರಾವ್ ವಿಮರ್ಶಾ ಪ್ರಶಸ್ತಿ, ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ ಹಾಗೂ ಸಾರಂಗಿ ವೆಂಕಟರಾಮಯ್ಯ- ಪುಟ್ಟಚ್ಚಮ್ಮ ದತ್ತಿ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
‘ರಾಜಕಾರಣಿಗಳು, ಅಧಿಕಾರಶಾಹಿ ವರ್ಗ ಸಂವೇದನೆಯನ್ನು ಉಳಿಸಿಕೊಂಡಾಗ ಮಾತ್ರ ಮಾನವಕುಲಕ್ಕೆ ಒಳಿತು ಮಾಡಲು ಸಾಧ್ಯ. ಸದಾ ಹಣ, ಅಧಿಕಾರದ ಬೆನ್ನತ್ತಿ ಹೋಗುತ್ತಿದ್ದಾರೆ. ಅಧಿಕಾರ, ಸಮಾಜ ಅಭಿವೃದ್ಧಿಯ ಕನಸುಗಳಿದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಆದರೆ, ನಮ್ಮ ಸುತ್ತಮುತ್ತ ಬರೀ ಕ್ರೌರ್ಯ, ಹಿಂಸೆ, ಅಸಹನೆ, ಅಸಮಾಧಾನವೇ ಆವರಿಸಿಕೊಂಡಿದ್ದು, ಸಂತೋಷಪಡುವ ಮನೋಭಾವವನ್ನೇ ಕಳೆದುಕೊಂಡಿದ್ದೇವೆ. ಸಮಾಜ ಪ್ರೀತಿಸುವ ಶಕ್ತಿಯನ್ನು ಕಳೆದುಕೊಂಡಿದೆ’ ಎಂದು ವಿಷಾದಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ‘ಪ್ರಶಸ್ತಿಗಾಗಿ ಲಾಭಿ ನಡೆಸುವ ಇಂದಿನ ದಿನಮಾನಗಳಲ್ಲಿ ಯಾವ ಅಪೇಕ್ಷೆಯನ್ನೂ ಇಟ್ಟುಕೊಳ್ಳದೆ ಸಮಾಜಕ್ಕಾಗಿ ಶ್ರಮಿಸುತ್ತಿರುವ ಸಾಧಕರಿಗೆ ಪ್ರಶಸ್ತಿಗಳು ಸಂದಿರುವುದು ಸಂತಸದ ವಿಷಯ’ ಎಂದರು.
‘ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವುದಿಲ್ಲ. ಐಟಿ, ಬಿಟಿ ಸೇರಿದಂತೆ ಎಲ್ಲ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿಗೆ ತರಲು ‘ಸರೋಜಿನಿ ಮಹಿಷಿ ವರದಿ’ಗೆ ಕೆಲವು ತಿದ್ದಪಡಿ ತರಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ’ ಎಂದು ಹೇಳಿದರು.
ಎಚ್.ದಂಡಪ್ಪ, ‘ಕನ್ನಡ ಆಡಳಿತ ಭಾಷೆಯಾದಾಗ ಮಾತ್ರ ಕನ್ನಡದ ಸಂಸ್ಕೃತಿ ಉಳಿಯಲು ಸಾಧ್ಯ. ಆದರೆ, ಆಡಳಿತದಲ್ಲಿ ಇಂಗ್ಲಿಷ್ ಭಾಷೆಯ ಬಳಕೆಯೇ ಹೆಚ್ಚಾಗುತ್ತಿರುವುದು ವಿಷಾದನೀಯ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.