ADVERTISEMENT

ಒಂದು ದಿನದ ಮಟ್ಟಿಗೆ ವೈದ್ಯೆಯಾದ ಬಾಲಕಿ- ಥಲಸ್ಸೇಮಿಯಾ ರೋಗಿಯ ಕನಸು ನನಸು

ಥಲಸ್ಸೇಮಿಯಾ ರೋಗಿಯ ಕನಸನ್ನು ಸಾಕಾರ ಮಾಡಿದ ನಾರಾಯಣ ಹೆಲ್ತ್‌ ಸಿಟಿ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 21:02 IST
Last Updated 8 ಅಕ್ಟೋಬರ್ 2022, 21:02 IST
ಡಾ. ಸುನಿಲ್ ಭಟ್ ಜತೆಗೆ ಫಾತಿಮಾ ಎ.ಕೆ.
ಡಾ. ಸುನಿಲ್ ಭಟ್ ಜತೆಗೆ ಫಾತಿಮಾ ಎ.ಕೆ.   

ಬೆಂಗಳೂರು:ಥಲಸ್ಸೇಮಿಯಾ ರೋಗದಿಂದ ಬಳಲುತ್ತಿರುವ 9 ವರ್ಷದ ಬಾಲಕಿ ಒಂದು ದಿನದ ಮಟ್ಟಿಗೆ ವೈದ್ಯೆಯಾಗಿ ಕಾರ್ಯನಿರ್ವಹಿಸಿ, ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದಾಳೆ.

ವೈದ್ಯೆಯಾಗಬೇಕೆಂಬ ಬಾಲಕಿಯ ಕನಸನ್ನುನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ವೈದ್ಯರು ಸಾಕಾರ ಮಾಡಿದ್ದಾರೆ.ಕೇರಳದ ಇರುಟ್ಟಿ ತಾಲ್ಲೂಕಿನ ಫಾತಿಮಾ ಎ.ಕೆ. ಥಲಸ್ಸೇಮಿಯಾ ರೋಗದಿಂದ ಬಳಲುತ್ತಿದ್ದ ಬಾಲಕಿ. ಅಸ್ಥಿಮಜ್ಜೆ ಕಸಿಗೆ (ಬೋನ್‌ ಮ್ಯಾರೊ) ಒಳಗಾಗಿದ್ದ ಫಾತಿಮಾ, ತಪಾಸಣೆ ಸಂಬಂಧ ಆಸ್ಪತ್ರೆಗೆ ಭೇಟಿ ನೀಡಿದ್ದಳು. ಈ ವೇಳೆ ದೊಡ್ಡವಳಾದ ಮೇಲೆ ವೈದ್ಯೆಯಾಗುವ ಕನಸನ್ನು ವೈದ್ಯರ ಬಳಿ ವ್ಯಕ್ತಪಡಿಸಿದ್ದಳು.

ಬಾಲಕಿಯ ಕನಸನ್ನು ಸಾಕಾರಗೊಳಿಸಲು ನಿರ್ಧರಿಸಿದ ಆಸ್ಪತ್ರೆಯ ಆಡಳಿತ ಮಂಡಳಿ,ಪೀಡಿಯಾಟ್ರಿಕ್ ಹೆಮಟಾಲಜಿ, ಆಂಕಾಲಜಿ ಮತ್ತು ಬೋನ್ ಮ್ಯಾರೊ ಟ್ರಾನ್ಸ್‌ಪ್ಲಾಂಟೇಶನ್ ವಿಭಾಗದಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುವ ಅವಕಾಶ ನೀಡಿತು. ಬಿಳಿ ಕೋಟ್ ಧರಿಸಿದ ಬಾಲಕಿ,ಸ್ಟೆತೋಸ್ಕೋಪ್‌ ಹಿಡಿದುಸಲಹಾ ವೈದ್ಯರ ತಂಡದ ಜತೆಗೆ ರೋಗಿಗಳನ್ನು ವಿಚಾರಿಸಿದಳು. ಈ ವೇಳೆ ವೈದ್ಯರುಸ್ಟೆತೋಸ್ಕೋಪ್‌ ನೆರವಿನಿಂದ ರೋಗಿಗಳನ್ನು ತಪಾಸಣೆ ಮಾಡುವ ವಿಧಾನವನ್ನು ತಿಳಿಸಿದರು.

ADVERTISEMENT

ರೋಗಿಗಳೊಂದಿಗೆ ಸಮಾಲೋಚನೆ:ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ವೈದ್ಯರಿಗೆ ನೆರವಾದ ಬಾಲಕಿ, ಒಳರೋಗಿ ವಿಭಾಗದಲ್ಲಿ ರೋಗಿಗಳ ಜತೆಗೆ ಸಮಾಲೋಚನೆ ನಡೆಸಿದಳು.

‘ಒಂದು ದಿನದ ಮಟ್ಟಿಗೆ ವೈದ್ಯೆಯಾಗಿ ಕಾರ್ಯನಿರ್ವಹಿಸಿರುವುದು ಖುಷಿ ನೀಡಿದೆ. ವೈದ್ಯರು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎನ್ನುವುದನ್ನು ತಿಳಿದುಕೊಂಡೆ. ದೊಡ್ಡವಳಾದ ಬಳಿಕ ವೈದ್ಯೆಯಾಗಿ, ಬಡ ರೋಗಿಗಳ ಆರೈಕೆ ಮಾಡುತ್ತೇನೆ’ ಎಂದುಫಾತಿಮಾ ಎ.ಕೆ. ತಿಳಿಸಿದಳು.

ಆಸ್ಪತ್ರೆಯಬೋನ್ ಮ್ಯಾರೊ ಟ್ರಾನ್ಸ್‌ಪ್ಲಾಂಟೇಶನ್ ವಿಭಾಗದ ನಿರ್ದೇಶಕ ಡಾ. ಸುನಿಲ್ ಭಟ್, ‘ಥಲಸ್ಸೇಮಿಯಾ, ಕ್ಯಾನ್ಸರ್ ಸೇರಿ ವಿವಿಧ ರೋಗಗಳ ಬಗ್ಗೆ ಬಹುತೇಕರಿಗೆ ತ‍ಪ್ಪು ಕಲ್ಪನೆಗಳಿವೆ. ಇದರಿಂದಾಗಿಯೇ ರೋಗಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾರೆ. ಈ ರೀತಿಯ ನಡೆಗಳಿಂದ ರೋಗಿಗಳಲ್ಲಿ ಭರವಸೆ ತುಂಬಲು ಸಾಧ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.