ADVERTISEMENT

ಎಸ್‌.ವಿ.ನಾರಾಯಣಸ್ವಾಮಿ ರಾವ್‌ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಮೇ 2019, 19:23 IST
Last Updated 5 ಮೇ 2019, 19:23 IST
ವಿದ್ವಾನ್‌ ಎ.ಆರ್‌. ಸುಬ್ರಹ್ಮಣಿಯಂ ಅವರಿಗೆ ವಿಶ್ವೇಶತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಸ್ಯಾಕ್ಸೊಫೋನ್‌ ವಾದಕ ಕದ್ರಿ ಗೋಪಾಲನಾಥ್‌, ಮಂಡಳಿಯ ಟ್ರಸ್ಟಿ ರಾಮಪ್ರಸಾದ್, ಉತ್ತರಾದಿ ಮಠದ ಆಡಳಿತಾಧಿಕಾರಿ ಸತ್ಯಧ್ಯಾನ ಆಚಾರ್ಯ ಕಟ್ಟಿ, ಟ್ರಸ್ಟ್‌ ಉಪಾಧ್ಯಕ್ಷ ಡಾ.ಎ.ರವೀಂದ್ರ ಇದ್ದರು –ಪ್ರಜಾವಾಣಿ ಚಿತ್ರ
ವಿದ್ವಾನ್‌ ಎ.ಆರ್‌. ಸುಬ್ರಹ್ಮಣಿಯಂ ಅವರಿಗೆ ವಿಶ್ವೇಶತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಸ್ಯಾಕ್ಸೊಫೋನ್‌ ವಾದಕ ಕದ್ರಿ ಗೋಪಾಲನಾಥ್‌, ಮಂಡಳಿಯ ಟ್ರಸ್ಟಿ ರಾಮಪ್ರಸಾದ್, ಉತ್ತರಾದಿ ಮಠದ ಆಡಳಿತಾಧಿಕಾರಿ ಸತ್ಯಧ್ಯಾನ ಆಚಾರ್ಯ ಕಟ್ಟಿ, ಟ್ರಸ್ಟ್‌ ಉಪಾಧ್ಯಕ್ಷ ಡಾ.ಎ.ರವೀಂದ್ರ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಶ್ರೀರಾಮಸೇವಾ ಮಂಡಳಿ ಟ್ರಸ್ಟ್‌ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ವಲಯಪಟ್ಟಿ ಎ.ಆರ್‌.ಸುಬ್ರಹ್ಮಣಿಯಂ ಅವರಿಗೆ ‘ಎಸ್‌.ವಿ.ನಾರಾಯಣಸ್ವಾಮಿ ರಾವ್‌ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ–2019’ ಪ್ರದಾನ ಮಾಡಿದರು.

ಪ್ರಶಸ್ತಿಯು ₹ 50 ಸಾವಿರ ನಗದು ಹಾಗೂ ₹ 40 ಸಾವಿರ ಮೌಲ್ಯದ ಪಂಚಲೋಹದ ಪ್ರತಿಮೆಯನ್ನು ಒಳಗೊಂಡಿದೆ.

ವಿಶ್ವೇಶತೀರ್ಥ ಸ್ವಾಮೀಜಿ, ‘ವಿಶ್ವಕ್ಕೆ ಭಾರತವು ಅನೇಕ ಕೊಡುಗೆಗಳನ್ನು ನೀಡಿದೆ. ಅದರಲ್ಲಿ ಭಾರತೀಯ ಸಂಗೀತವೂ ಒಂದು. ನಮ್ಮಲ್ಲಿ ಪಾಶ್ಚಾತ್ಯ, ಸಿನಿಮಾ ಸಂಗೀತಗಳಿವೆ. ಆ ಸಂಗೀತಗಳು ಮನಸ್ಸನ್ನು ಕೆರಳಿಸುತ್ತವೆ. ಭಾರತೀಯ ಸಂಗೀತ ಮನಸ್ಸನ್ನು ಅರಳಿಸುತ್ತದೆ. ಪಾಶ್ಚಾತ್ಯ ಸಂಗೀತ ಮಾದಕವಾದರೆ, ಭಾರತೀಯ ಸಂಗೀತ ಮೋದಕ ಇದ್ದಂತೆ. ನಮ್ಮ ಸಂಗೀತ ರಾಷ್ಟ್ರೀಯ ಸಂಪತ್ತು. ಅದರ ರಕ್ಷಣೆ ಮತ್ತು ಪ್ರಸಾರ ಮಾಡಬೇಕು’ ಎಂದರು.

ADVERTISEMENT

‘ಸಂಗೀತಕ್ಕೆ ಗಡಿ, ಭಾಷೆ, ಧರ್ಮ ಇಲ್ಲ. ನಿಜವಾದ ಅರ್ಥದಲ್ಲಿ ಸಂಗೀತ ಜಾತ್ಯತೀತ ಮತ್ತು ಭಾಷಾತೀತ. ಅನೇಕ ಮುಸ್ಲಿಮರು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಹೆಸರಾಂತ ಕಲಾವಿದರಾಗಿದ್ದಾರೆ. ಎಲ್ಲರನ್ನೂ ಒಂದುಗೂಡಿಸುವ, ಶಾಂತಿ ಸ್ಥಾಪಿಸಿ, ಸೌಹಾರ್ದ ಸಾರುವ ಶಕ್ತಿ ಸಂಗೀತಕ್ಕೆ ಇದೆ’ ಎಂದು ಅವರು ತಿಳಿಸಿದರು.

‘ವಾದ್ಯಗಳ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಅಪಸ್ವರ ಉಂಟಾಗುತ್ತದೆ. ಅದೇ ರೀತಿ ದೇಶದಲ್ಲಿನ ಎಲ್ಲ ಜಾತಿ–ಧರ್ಮಗಳ ನಡುವೆ ಹೊಂದಾಣಿಕೆ ಇಲ್ಲದಿದ್ದರೆ, ನಮ್ಮ ದೇಶವೇ ಅಪಸ್ವರವಾಗುತ್ತದೆ’ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.