ಬೆಂಗಳೂರು: ಖಾಸಗಿ ಕಂಪನಿಯೊಂದರ ಲೆಕ್ಕಪರಿಶೋಧಕ ಟಿ.ಎನ್.ರಾಜೇಶ್ ಎಂಬುವರ ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು, 450 ಗ್ರಾಂ ಚಿನ್ನ ಹಾಗೂ ₹ 20 ಸಾವಿರ ನಗದು ದೋಚಿದ್ದಾರೆ.
ಮೈಸೂರು ರಸ್ತೆಯ ನ್ಯೂ ಕವಿಕಾ ಲೇಔಟ್ನಲ್ಲಿ ಶುಕ್ರವಾರ ಬೆಳಿಗ್ಗೆ 10.30 ರಿಂದ 12.30ರ ನಡುವೆ ಈ ಕೃತ್ಯ ನಡೆದಿದೆ. ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾಗಳ ಡಿವಿಆರ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
‘ಎಂದಿನಂತೆ ಬೆಳಿಗ್ಗೆ 8.30ಕ್ಕೆ ಕೆಲಸಕ್ಕೆ ತೆರಳಿದ್ದೆ. ನಾವು ರಾಜರಾಜೇಶ್ವರಿನಗರದಲ್ಲಿ ಮನೆ ಕಟ್ಟಿಸುತ್ತಿದ್ದು, ಪತ್ನಿ ಚಂದ್ರಕಲಾ 10.30ರ ಸುಮಾರಿಗೆ ಆ ಮನೆಯ ಹತ್ತಿರ ಹೋಗಿದ್ದಳು. ಆಕೆ ಮಧ್ಯಾಹ್ನ ವಾಪಸ್ ಬಂದಾಗ ಬಾಗಿಲು ತೆರೆದಿತ್ತು. ಗಾಬರಿಯಿಂದ ಕೂಡಲೇ ನನಗೆ ಕರೆ ಮಾಡಿದಳು’ ಎಂದು ರಾಜೇಶ್ ದೂರಿನಲ್ಲಿ ವಿವರಿಸಿದ್ದಾರೆ.
‘ಹತ್ತು ನಿಮಿಷಗಳಲ್ಲೇ ಮನೆ ಹತ್ತಿರ ಬಂದೆ. ಒಳಗೆ ಹೋಗಿ ನೋಡಿದಾಗ ಅಲ್ಮೆರಾ ಬಾಗಿಲು ಕೂಡ ತೆಗೆದಿತ್ತು. ಅದರಲ್ಲಿದ್ದ ₹ 13 ಲಕ್ಷ ಮೌಲ್ಯದ ಒಡವೆ ಹಾಗೂ ₹ 20 ಸಾವಿರ ಕಳವಾಗಿತ್ತು. ಕಳ್ಳರನ್ನು ಪತ್ತೆ ಮಾಡಿ ನಮ್ಮ ಆಭರಣಗಳನ್ನು ವಾಪಸ್ ಕೊಡಿಸಿ’ ಎಂದು ಅವರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.