ಕೆಂಗೇರಿ: ‘ಪರಿಸರವು ದೇವರ ಅಮೂಲ್ಯ ಕೊಡುಗೆ. ಇದನ್ನು ರಚನಾತ್ಮಕವಾಗಿ ಬಳಸಿಕೊಳ್ಳ
ಬೇಕು. ಸಂಪನ್ಮೂಲಗಳ ಎಲ್ಲೆ ಮೀರಿದ ಬಳಕೆ ಹಾಗೂ ಕೊಳ್ಳುಬಾಕತನದಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆ. ಪ್ರಕೃತಿಯ ಮೇಲೆ ಆಕ್ರಮಣ ನಡೆಸಿದರೆ ಕಂಟಕ ಕಟ್ಟಿಟ್ಟ ಬುತ್ತಿ. ಇದರಿಂದ ಮನುಜ ಕುಲ ವಿನಾಶವಾಗುತ್ತದೆ’ ಎಂದು ಆದಿ ಚುಂಚನಗಿರಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಎಚ್ಚರಿಸಿದರು.
ಬಿಜಿಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮತ್ತು ಪ್ಲ್ಯಾನಿಂಗ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಿ ಅವರು ಮಾತನಾಡಿದರು.
ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ಸ್ ಕರ್ನಾಟಕದ ಪ್ರತಿನಿಧಿ ವಿದ್ಯಾಧರ್ ಒಡೆಯರ್, ‘ಹಣ ಗಳಿಸುವುದು, ಪ್ರಶಸ್ತಿ ಪಡೆಯುವುದು ಯಶಸ್ಸಿನ ವ್ಯಾಖ್ಯಾನವಲ್ಲ. ಸಮಾಜಕ್ಕೆ ವೈಯಕ್ತಿಕ ಕಾಣಿಕೆ ನೀಡುವುದೇ ನಿಜವಾದ ಯಶಸ್ಸು’ ಎಂದು ಹೇಳಿದರು.
ವಾಸ್ತುಶಿಲ್ಪಿ ಲೀನಾ ಕುಮಾರ್, ‘ಆತ್ಮವಿಶ್ವಾಸದಿಂದ ಮುನ್ನುಗಿದರೆ ಯಶಸ್ಸು ತನ್ನಿಂದತಾನೆ ಒಲಿಯುತ್ತದೆ. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಸಾಗುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಹೇಳಿದರು.
ಬಿಜಿಎಸ್ ಶಿಕ್ಷಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥಸ್ವಾಮೀಜಿ, ಪ್ರಾಂಶುಪಾಲ ನಿತಿನ್, ಎಸ್ಜೆಬಿಐಟಿ ಪ್ರಾಂಶುಪಾಲ ಸಿ.ಕೆ.ಅಜಯ್ ಚಂದ್ರನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಒಟ್ಟು 124 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.