ಬೆಂಗಳೂರು: ‘ಪ್ರಾಣಿಗಳನ್ನು ಹಿಂಸೆಯಿಂದ ರಕ್ಷಿಸಲು ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಬೇಕು’ ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯುಬಿಐ) ಸದಸ್ಯ ಜೆ. ಗಿರೀಶ್ ಶಾ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಸರ್ಕಾರಗಳು ಇಚ್ಛಾ ಶಕ್ತಿ ಪ್ರದರ್ಶಿಸಿದರೆ ಮಾತ್ರ ಮೂಕಪ್ರಾಣಿಗಳ ರಕ್ಷಣೆ ಸಾಧ್ಯ. ಮೇವು ಬ್ಯಾಂಕ್ ತೆರೆದು ಪಶುಗಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು.
ಸರ್ಕಾರೇತರ ಸಂಸ್ಥೆ ‘ಸಮಸ್ತ ಮಹಾಜನ್’ನ ವ್ಯವಸ್ಥಾಪಕ ಟ್ರಸ್ಟಿಯೂ ಆಗಿರುವ ಶಾ, ‘ನಮ್ಮ ಈ ಸಂಸ್ಥೆ ಪರಿಸರ ಸಂರಕ್ಷಣೆ, ಪಶು ಕಲ್ಯಾಣ, ಗೋಶಾಲೆಗಳ ಅಭಿವೃದ್ದಿಗೆ ಎರಡು ದಶಕಗಳಿಂದ ನೆರವಾಗುತ್ತಿದೆ. ರಾಜಸ್ಥಾನದಲ್ಲಿ ಪ್ರಾಣಿಗಳು ನೀರು, ಆಹಾರವಿಲ್ಲದ ಸ್ಥಿತಿಯಲ್ಲಿದ್ದವು. ಗಡಿ ಭಾಗದ 25 ಗ್ರಾಮಗಳನ್ನು ದತ್ತು ಪಡೆದು, ಅಲ್ಲಿ ಜಾನುವಾರುಗಳಿಗೆ ನೀರು, ಆಹಾರ, ಮತ್ತು ವೈದ್ಯಕೀಯ ಸೇವೆ ಒದಗಿಸುವ ಮೂಲಕ ಅವುಗಳ ರಕ್ಷಣೆಗೆ ನಮ್ಮ ಸಂಸ್ಥೆ ನೆರವಾಗುತ್ತಿದೆ. ಥಾರ್ನಲ್ಲಿ ನೀರು ಸಂಗ್ರಹಣೆಗೆ ಹೊಂಡಗಳನ್ನು ನಿರ್ಮಿಸಿದ್ದೇವೆ. ಅದರ ನೀರನ್ನು ಹುಲ್ಲು ಮತ್ತು ಮರಗಿಡಗಳನ್ನು ಬೆಳೆಸಲು ಬಳಸುತ್ತಿದ್ದೇವೆ. ವರ್ಷಪೂರ್ತಿ ಮೇವು ಒದಗಿಸಲು ಇದರಿಂದ ಸಾಧ್ಯವಾಗಿದೆ’ ಎಂದರು.
‘ಪ್ರಾಣಿಗಳನ್ನು ಉಳಿಸಿ ರಕ್ಷಿಸಲು ನಮ್ಮ ಸಂಸ್ಥೆ ಕರ್ನಾಟಕ ಸರ್ಕಾರದ ಜೊತೆ ಕಾರ್ಯ ನಿರ್ವಹಿಸಲು ಸಿದ್ಧ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.