ಬೆಂಗಳೂರು: ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ ಮನೆ ಮಾಲೀಕರಾದ ಮಹಿಳೆಯ ಕೈ– ಕಾಲು ಕಟ್ಟಿಹಾಕಿ ₹ 94 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದ್ದು, ನೇಪಾಳದ ಗ್ಯಾಂಗ್ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.
‘ಗೃಹಲಕ್ಷ್ಮಿ ಬಡಾವಣೆಯ ಮನೆಯೊಂದರಲ್ಲಿ ದರೋಡೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳದ ಮಹಿಳೆ ಹಾಗೂ ಆಕೆಯ ಕಡೆಯವರು ದರೋಡೆ ಮಾಡಿರುವ ಶಂಕೆ ಇದೆ. ಪ್ರಕರಣ ಭೇದಿಸಲು ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರುದಾರ ವಿಘ್ನೇಶ್ವರಿ ಎಂಬುವರು ಪತಿ ಹಾಗೂ ಮಗನ ಜೊತೆ ವಾಸವಿದ್ದಾರೆ. ಮನೆ ಕೆಲಸಕ್ಕೆಂದು ನೇಪಾಳದ ಅನು ಎಂಬಾಕೆಯನ್ನು ನೇಮಕ ಮಾಡಿಕೊಂಡಿದ್ದರು. ನಿತ್ಯವೂ ಕೆಲಸಕ್ಕೆ ಬಂದು ಹೋಗುತ್ತಿದ್ದ ಅನು, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣ ಗಮನಿಸಿದ್ದಳು. ತಮ್ಮೂರಿನ ಗ್ಯಾಂಗ್ ಜೊತೆ ಸೇರಿ ಸಂಚು ರೂಪಿಸಿ ದರೋಡೆ ಮಾಡಿಸಿರುವ ಮಾಹಿತಿ ಇದೆ’ ಎಂದೂ ಮೂಲಗಳು ತಿಳಿಸಿವೆ.
ಮನೆಯಲ್ಲೇ ಕಾದು ಕುಳಿತು ಕೃತ್ಯ: ‘ವಿಘ್ನೇಶ್ವರಿ ಅವರ ಮಗ ಶಾಲೆಗೆ ಹೋಗಿದ್ದ. ಪತಿ ಕೆಲಸಕ್ಕೆ ತೆರಳಿದ್ದರು. ಅದೇ ವೇಳೆ ಆರೋಪಿ ಅನು ಕೆಲಸಕ್ಕೆ ಬಂದಿದ್ದಳು. ದೇವಸ್ಥಾನಕ್ಕೆ ಹೋಗಿಬರುವುದಾಗಿ ಹೇಳಿ ವಿಘ್ನೇಶ್ವರಿ ಮನೆಯಿಂದ ಹೊರಹೋಗಿದ್ದರು. ಆಗ ಅನು, ನೇಪಾಳದ ಕೆಲವರನ್ನು ಮನೆಗೆ ಕರೆಸಿಕೊಂಡಿದ್ದಳು. ಮನೆಯಲ್ಲೆಲ್ಲ ಹುಡುಕಾಡಿ ಚಿನ್ನಾಭರಣ ಹಾಗೂ ನಗದನ್ನು ಚೀಲಕ್ಕೆ ತುಂಬಿಟ್ಟುಕೊಂಡಿದ್ದರು’ ಎಂದೂ ಮೂಲಗಳು ಹೇಳಿವೆ.
‘ಕೆಲ ನಿಮಿಷಗಳ ನಂತರ ವಿಘ್ನೇಶ್ವರಿ, ದೇವಸ್ಥಾನದಿಂದ ಮನೆಗೆ ವಾಪಸು ಬಂದಿದ್ದರು. ಅನು ಬಾಗಿಲು ತೆರೆದಿದ್ದಳು. ವಿಘ್ನೇಶ್ವರಿ ಒಳಗೆ ಬರುತ್ತಿದ್ದಂತೆ ಆರೋಪಿಗಳು ದಾಳಿ ಮಾಡಿದ್ದರು. ಕೈ–ಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿದ್ದರು. ನಂತರ, 2 ಕೆಜಿ ಚಿನ್ನಾಭರಣ ಹಾಗೂ ₹ 10 ಲಕ್ಷ ಹಣದ ಸಮೇತ ಆರೋಪಿಗಳು ಪರಾರಿಯಾಗಿದ್ದಾರೆ’ ಎಂದೂ ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.