ಬೆಂಗಳೂರು: ‘ಪರಿಸರ ಸಂರಕ್ಷಣೆ ಮತ್ತು ವಿದೇಶಿ ಶಕ್ತಿಗಳ ಕೈವಾಡದ ಬಗ್ಗೆ ‘ಬೀಸು ಹೇಳಿಕೆ’ ನೀಡಬಾರದು. ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸುವಾಗ ನಿಖರತೆ ಇರಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ(ಎನ್ಎಚ್ಎಐ) ಹೈಕೋರ್ಟ್ ತಿಳಿಸಿದೆ.
‘ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವ ಬಹುತೇಕ ಸಂಘಟನೆಗಳು ಗೋಪ್ಯ ಉದ್ದೇಶಗಳನ್ನು ಒಳಗೊಂಡಿವೆ. ವಿದೇಶಿ ಶಕ್ತಿಗಳ ಬೆಂಬಲ ಪಡೆದಿರುತ್ತವೆ ಮತ್ತು ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತವೆ’ ಎಂದು ಎನ್ಎಚ್ಎಐ ಉಪಮಹಾ ವ್ಯವಸ್ಥಾಪಕ ಆರ್.ಬಿ. ಪೇಕಮ್ ಆಕ್ಷೇಪಣೆ ಸಲ್ಲಿಸಿದ್ದರು.
ಈ ಆಕ್ಷೇಪಣೆ ಹಿಂಪಡೆಯಲು ಅವಕಾಶ ನೀಡದ ಪೀಠ, ‘ಆಕ್ಷೇಪಣೆ ಸಿದ್ಧಪಡಿಸಿರುವ ಹಿಂದಿನ ಉದ್ದೇಶ ಮತ್ತು ಪ್ರಹಸನದ ಸಂಪೂರ್ಣ ತನಿಖೆ ನಡೆಸಬೇಕು’ ಎನ್ಎಚ್ಎಐ ಅಧ್ಯಕ್ಷರಿಗೆ ಸೂಚನೆ ನೀಡಿತು.
ವಿದೇಶಿ ಹಣ ಪಡೆಯಲಾಗುತ್ತಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಅರ್ಜಿದಾರರಾದ ಯುನೈಟೆಡ್ ಕನ್ಸರ್ವೇಷನ್ ಮೂವ್ಮೆಂಟ್ ಚಾರಿಟಬಲ್ ಮತ್ತು ವೆಲ್ಫೇರ್ ಟ್ರಸ್ಟ್ಗೂ ಪೀಠ ತಿಳಿಸಿತು.
ಪರಿಸರ ಪರಿಣಾಮ ಮೌಲ್ಯಮಾಪನ(ಇಐಎ) ಪರಿಗಣಿಸದೆ ರಾಷ್ಟ್ರೀಯ ಹೆದ್ದಾರಿ 4 ವಿಸ್ತರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್ನಲ್ಲಿ ಟ್ರಸ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.