ADVERTISEMENT

ಐಎಸ್ ಜೊತೆ ನಂಟು; ಬೆಂಗಳೂರಿನಲ್ಲಿ ಮನೆ, ಕ್ಲಿನಿಕ್ ಮೇಲೆ ಎನ್‌ಐಎ ದಾಳಿ

ಭಯೋತ್ಪಾದನಾ ಕೃತ್ಯ ಎಸಗಲು ಹೊಂಚು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 21:38 IST
Last Updated 16 ಮಾರ್ಚ್ 2021, 21:38 IST
ಎನ್‌ಐಎ
ಎನ್‌ಐಎ   

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ (ಐಎಸ್‌) ಉಗ್ರ ಸಂಘಟನೆ ಜೊತೆ ನಂಟು ಹೊಂದಿ ಭಯೋತ್ಪಾದನಾ ಕೃತ್ಯ ಎಸಗಲು ಹೊಂಚು ಹಾಕುತ್ತಿದ್ದ ಆರೋಪದಡಿ ಶಂಕಿತ ಉಗ್ರರನ್ನು ಕೇರಳ ಹಾಗೂ ದೆಹಲಿಯಲ್ಲಿ ಇತ್ತೀಚೆಗಷ್ಟೇ ಬಂಧಿಸಿದ್ದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ನಗರದ ಎರಡು ಕಡೆ ದಾಳಿ ಮಾಡಿದರು.

‘ಐಎಸ್‌ ಸಂಘಟನೆ ಧ್ಯೇಯ ಮೈಗೊಡಿಸಿಕೊಂಡಿದ್ದ ಪ್ರಮುಖ ಆರೋಪಿ ಮೊಹಮ್ಮದ್ ಅಮೀನ್ ಅಲಿಯಾಸ್ ಅಬು ಯಾಹ್ಯಾ, ದೇಶದಾದ್ಯಂತ ಸಂಘಟನೆಗೆ ಹೊಸ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ. ಅದಕ್ಕಾಗಿ ಟೆಲಿಗ್ರಾಂ, ಹೋಪ್ ಹಾಗೂ ಇನ್‌ಸ್ಟಾಗ್ರಾಂ ಬಳಕೆ ಮಾಡುತ್ತಿದ್ದ. ದೇಶದಲ್ಲಿ ಭಯೋತ್ಪಾದನಾ ಕೃತ್ಯ ಎಸಗುವುದು ಹಾಗೂ ಐಎಸ್ ಪರ ಪ್ರಚಾರ ಮಾಡುವುದು ಪ್ರಮುಖ ಆರೋಪಿ ಉದ್ದೇಶವಾಗಿತ್ತು’ ಎಂದು ಎನ್‌ಐಎ ಅಧಿಕಾರಿಯೊಬ್ಬರು ಹೇಳಿದರು.

‘ಶಂಕಿತ ಉಗ್ರರ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕೇರಳ, ಕರ್ನಾಟಕ ಹಾಗೂ ದೆಹಲಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಬೆಂಗಳೂರಿನ ಡಾ. ರಾಹೀಶ್ ರಶೀದ್ ಸೇರಿದಂತೆ 7 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಆರೋಪಿಗಳಿಗೆ ಸೇರಿದ್ದ ಮನೆ ಹಾಗೂ ಕಚೇರಿ ಸೇರಿದಂತೆ 11 ಸ್ಥಳಗಳ ಮೇಲೆ ಸೋಮವಾರ ದಾಳಿ ಮಾಡಲಾಯಿತು’ ಎಂದೂ ಅವರು ತಿಳಿಸಿದರು.

ADVERTISEMENT

‘ಡಾ. ರಾಹೀಶ್‌ಗೆ ಸೇರಿದ್ದ ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿರುವ ಮನೆ ಹಾಗೂ ಕೆಂಗೇರಿಯಲ್ಲಿರುವ ಕ್ಲಿನಿಕ್ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಲಾಯಿತು. ಒಟ್ಟು 11 ಕಡೆ ನಡೆದ ದಾಳಿಯಲ್ಲಿ ಲ್ಯಾಪ್‌ಟಾಪ್, ಮೊಬೈಲ್‌, ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ಅಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.