ಬೆಂಗಳೂರು: ‘ಒಕ್ಕಲಿಗರ ಸ್ಥಿತಿಗತಿ ಅರಿಯಲು ವೈಜ್ಞಾನಿಕ ಸಮೀಕ್ಷೆ ನಡೆಸಲಾಗುತ್ತಿದೆ. ಇದರ ವರದಿಯನ್ನು ಸರ್ಕಾರದ ಮುಂದಿಟ್ಟು ಸವಲತ್ತಿಗಾಗಿ ಹೋರಾಟ ನಡೆಸುವ ಕಾಲ ಹತ್ತಿರವಾಗಿದೆ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ
ಅಭಿಪ್ರಾಯಪಟ್ಟರು.
ಸಾಹಿತ್ಯ ಸಂಗಮ ಟ್ರಸ್ಟ್ ಮತ್ತು ಒಕ್ಕಲಿಗರ ವಾಯ್ಸ್ ಮಾಸಪತ್ರಿಕೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮಣ್ಣಿನ ಹಣತೆ’ ಸಂಪುಟ–3 ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಪೂರ್ಣಗೊಂಡ ಕೂಡಲೇ ಒಕ್ಕಲಿಗರಿಗೆ ಇರುವ ತೊಂದರೆಗಳು, ಬೇಕಾಗಿರುವ ಸವಲತ್ತುಗಳ ಬಗ್ಗೆ ಸರ್ಕಾರಕ್ಕೆ ಸವಿಸ್ತಾರ ಬೇಡಿಕೆ ಸಲ್ಲಿಸಲಾಗುವುವುದು. ಒಕ್ಕಲಿಗರ ಧ್ವನಿಗೆ ಸಂಚಕಾರ ಬರುವ ದಿನಗಳು ಕಾಣಿಸುತ್ತಿವೆ. ಹೀಗಾಗಿ, ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ. ಕಾನೂನಿನ ಇತಿಮಿತಿಯಲ್ಲಿ ಬೇಡಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪೂರ್ವಭಾವಿ ಸಭೆಗಳು ನಡೆಯುತ್ತಿವೆ’ ಎಂದು ಹೇಳಿದರು.
‘ಸಮುದಾಯದವರು ಬುದ್ಧಿವಂತರಾಗಬೇಕು. ಸುತ್ತಮುತ್ತ ಏನೆಲ್ಲಾ ಪಿತೂರಿ ನಡೆಯುತ್ತಿದೆ ಎಂದು ತಿಳಿಯಬೇಕು. ಕೆಲವರಿಗೆ ಅಧಿಕಾರ ಕೊಟ್ಟಿದ್ದೇವೆ, ಅವರು ನಮ್ಮನ್ನು ಸುಮ್ಮನಿರಿಸಲು ಯತ್ನಿಸುತ್ತಿದ್ದಾರೆ. ಇಂತವರ ಬಗ್ಗೆ ನಿಗಾ
ವಹಿಸಬೇಕು. ಈಗ ಸೂಕ್ಷ್ಮವಾಗಿ ಹೇಳು
ತ್ತಿದ್ದೇನೆ. ಕಾಲ ಬಂದಾಗ ಬಹಿರಂಗ
ವಾಗಿಯೇ ಹೇಳುತ್ತೇನೆ’ ಎಂದರು.
‘ಒಕ್ಕಲಿಗರು ಸಾಮ್ರಾಜ್ಯ ಸ್ಥಾಪಿಸಿ ಈ ನಾಡನ್ನು ಆಳಿದ ಉದಾಹರಣೆಗಳಿವೆ. ಗಂಗರ ಸಾಮ್ರಾಜ್ಯದಲ್ಲಿ ಅಕ್ಕಪಕ್ಕದ ರಾಜ್ಯಗಳೆಲ್ಲವೂ ಸೇರಿದ್ದವು. ಕೆಂಪೇಗೌಡ ತಮಿಳುನಾಡಿನವರು ಎಂಬ ವಾದವೂ ಸರಿಯಲ್ಲ. ತಮಿಳುನಾಡು ಕೂಡ ಗಂಗರ ಆಳ್ವಿಕೆಗೆ ಒಳಪಟ್ಟಿತ್ತು. ಒಕ್ಕಲಿಗರು ಒಳ ಭೇದಗಳನ್ನು ಹುಡುಕದೆ ಒಗ್ಗಟ್ಟಿನಿಂದ ಮುಂದೆ ಸಾಗಬೇಕು. ಮಕ್ಕಳಿಗೆ ಇತಿಹಾಸ ತಿಳಿಸಿಕೊಡುವ ಪ್ರಯತ್ನವೂ ಆಗಬೇಕು’ ಎಂದು ಸ್ವಾಮೀಜಿ ಪ್ರತಿಪಾದಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಮುದಾಯದವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.