ADVERTISEMENT

ಸ್ಯಾಂಕಿ ಮೇಲ್ಸೇತುವೆ ಬೇಡ: ಮಕ್ಕಳ ಪತ್ರ

ಪ್ರಜಾವಾಣಿ ಚಿತ್ರ
Published 20 ಜನವರಿ 2023, 16:27 IST
Last Updated 20 ಜನವರಿ 2023, 16:27 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿದ್ಯಾರ್ಥಿಗಳು ಬರೆದಿರುವ ‘ಪೋಸ್ಟ್‌ಕಾರ್ಡ್‌’.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿದ್ಯಾರ್ಥಿಗಳು ಬರೆದಿರುವ ‘ಪೋಸ್ಟ್‌ಕಾರ್ಡ್‌’.   

ಬೆಂಗಳೂರು: ಮಲ್ಲೇಶ್ವರ, ವೈಯಾಲಿಕಾವಲ್‌ ಮತ್ತು ಸದಾಶಿವನಗರದ ಸುಮಾರು 2 ಸಾವಿರ ವಿದ್ಯಾರ್ಥಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಪ್ರಸ್ತಾವವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

‘ಬೊಮ್ಮಾಯಿ ಅಂಕಲ್‌’ ಎಂದು ಪೋಸ್ಟ್‌ ಕಾರ್ಡ್‌ನಲ್ಲಿ ಬರಹ ಆರಂಭಿಸಿದ್ದು, ಸ್ಥಳೀಯ ಜನರ ಸಲಹೆಯನ್ನು ಕೇಳದೆ ಬಿಬಿಎಂಪಿ ಮೇಲ್ಸೇತುವೆ ನಿರ್ಮಿಸುವ ಯೋಜನೆ ಆರಂಭಿಸಿದೆ. ಈ ಯೋಜನೆಯಿಂದ ಮಕ್ಕಳಿಗೆ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ಸ್ಟೆಲ್ಲಾ ಮೆರಿಸ್‌ ಶಾಲೆಗೆ ಸಂಬಂಧಿಸಿದ ಸಾಕಷ್ಟು ಭೂಮಿ ಈ ಯೋಜನೆಗೆ ಹೋಗುತ್ತದೆ ಎಂದು ಹೇಳಿದ್ದಾರೆ.

‘ಮಕ್ಕಳು ಪ್ರಾರ್ಥನೆ ಸಲ್ಲಿಸುವ, ಕ್ರೀಡಾ ಚಟುವಟಿಕೆ ನಡೆಸುವ ಮತ್ತು ಊಟ ಮಾಡುವ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಸಮೀಪವಿರುವ ಪೂರ್ಣಪ್ರಜ್ಞ ಶಾಲೆಗೂ ಸಂಕಷ್ಟ ಉಂಟಾಗಲಿದ್ದು, ವಿದ್ಯಾರ್ಥಿಗಳು ನಿತ್ಯವೂ ಕ್ರೀಡಾ ಚಟುವಟಿಕೆಗೆ ಮೈದಾನಕ್ಕೆ ಹೋಗಲು ಸಮಸ್ಯೆಯಾಗಲಿದೆ. ನಮಗೆ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಎದುರಾಗಿದೆ’ ಎಂದು ಸ್ಥಳೀಯರು ಹೇಳಿದರು.

ADVERTISEMENT

‘ಸಂಚಾರ ದಟ್ಟಣೆಗೆ ಕಾವೇರಿ ಚಿತ್ರಮಂದಿರ ಬಳಿ ಇರುವ ಅಂಡರ್‌ಪಾಸ್‌ ಕಾರಣ. ಸ್ಯಾಂಕಿ ಮೇಲ್ಸೇತುವೆಯಿಂದ ಇದಕ್ಕೆ ಪರಿಹಾರ ಸಿಗುವುದಿಲ್ಲ. ಈ ಮೇಲ್ಸೇತುವೆ ನಿರ್ಮಾಣದಿಂದ ವಾಹನಗಳು ಬೇಗ ಚಲಿಸಿ, ಅಂಡರ್‌ಪಾಸ್‌ನಲ್ಲಿ ಮತ್ತಷ್ಟು ದಟ್ಟಣೆಯಾಗಲಿದೆ. ಈ ಪ್ರದೇಶವನ್ನು ಮತ್ತಷ್ಟು ಹಾಳು ಮಾಡುವುದು ಬೇಡ’ ಎಂದು ಸ್ಥಳೀಯರಾದ ಕೆ.ಆರ್‌. ಅಯ್ಯರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.