ADVERTISEMENT

ಹೈಕೋರ್ಟ್ ಆವರಣದಲ್ಲಿ ಪಕ್ಷಿಗಳಿಗೆ ನೀರುಣಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 20:40 IST
Last Updated 8 ಏಪ್ರಿಲ್ 2020, 20:40 IST
   

ಬೆಂಗಳೂರು: ‘ಕಬ್ಬನ್ ಪಾರ್ಕ್ ಹಾಗೂ ಸುತ್ತಮುತ್ತಲಿನ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ಹೈಕೋರ್ಟ್ ವಾಹನ ನಿಲುಗಡೆ ಪ್ರದೇಶದಲ್ಲಿರುವ ಸಣ್ಣ ಗುಂಡಿಗೆ ನೀರು ತುಂಬಿಸಿ’ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕರಿಗೆ ಹೈಕೋರ್ಟ್ ಸೂಚಿಸಿದೆ.

ಈ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಅವರ ಆದೇಶದ ಅನುಸಾರ, ಆಡಳಿತ ವಿಭಾಗದ ರಿಜಿಸ್ಟ್ರಾರ್ ವೆಂಕಟೇಶ್ ನಾಯಕ್ ತೋಟಗಾರಿಕೆ ಇಲಾಖೆಗೆ ಇದೇ 7ರಂದು ಪತ್ರ ಬರೆದು ಸೂಚಿಸಿದ್ದಾರೆ.

‘ಕಬ್ಬನ್ ಪಾರ್ಕ್‌ನಲ್ಲಿ ನೂರಾರು ಬಗೆಯ ಪಕ್ಷಿ, ಅಳಿಲು, ನಾಯಿಗಳಿವೆ. ಅವುಗಳಿಗೆ ಕುಡಿಯುವ ನೀರು ಒದಗಿಸಲು ಹೈಕೋರ್ಟ್ ವಾಹನ ನಿಲುಗಡೆ ಜಾಗದಲ್ಲಿ ಮೂರು ಸಿಮೆಂಟ್ ಪಾಟ್ ಹಾಗೂ ತೆರೆದ ಗುಂಡಿ ನಿರ್ಮಿಸಲಾಗಿದೆ. ಅವುಗಳಲ್ಲಿ ನೀರು ತುಂಬಿಸುವ ಕೆಲಸವನ್ನು ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡುತ್ತಿತ್ತು. ಆದರೆ, ಲಾಕ್‌ಡೌನ್‌ನಿಂದ ನೀರು ತುಂಬಿಸುವವರಿಲ್ಲದೆ ಅವು ಬತ್ತಿಹೋಗಿವೆ’ ಎಂದು ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹ ಮೂರ್ತಿ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.