ಬೆಂಗಳೂರು: ಎನ್.ಆರ್. ಕಾಲೊನಿ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ನಿರ್ಮಾಣಕ್ಕೆ ಮರಗಳನ್ನು ಕಡಿಯದಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ಬಂಧಿಸಿದೆ.
ತ್ಯಾಗರಾಜನಗರದ ನಿವಾಸಿ ಪ್ರಶಾಂತ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು.
‘ಸ್ಕೈವಾಕ್ ನಿರ್ಮಿಸಲು ಉದ್ದೇಶಿಸಿರುವಸ್ಥಳದಲ್ಲಿ ಕಿರಿದಾದ ರಸ್ತೆಗಳಿವೆ. ಕೆಲವರು ಪಾದಚಾರಿ ಮಾರ್ಗವನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳ ತೆರವಿಗೆ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅರ್ಜಿದಾರರು ಆರೋಪಿಸಿದರು.
‘ಸ್ಕೈವಾಕ್ ಯಾವ ಜಾಗದಲ್ಲಿ ನಿರ್ಮಿಸಬೇಕು ಎಂಬುದನ್ನು ಕೋರ್ಟ್ ನಿರ್ಧರಿಸುವುದಿಲ್ಲ.ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ ಪ್ರಕಾರ ಯಾವುದೇ ಪ್ರಾಧಿಕಾರವು ಅನುಮತಿ ಪಡೆಯದೆ ಮರಗಳನ್ನು ಕಡಿಯಲು ಸಾಧ್ಯವಿಲ್ಲ. ಇದು ಬಿಬಿಎಂಪಿಗೂ ತಿಳಿದಿದೆ. ಅನುಮತಿ ಪಡೆಯದೆ ಮರ ಕಡಿಯುವುದಿಲ್ಲ ಎಂಬುದನ್ನು ಪಾಲಿಕೆ ಖಚಿತಪಡಿಸಬೇಕು. ಉದ್ದೇಶಿತ ಸ್ಕೈವಾಕ್ ಸ್ಥಳದ ಸುತ್ತಮುತ್ತ ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದರೆ ತೆರವುಗೊಳಿಸಲು ಅಧಿಕಾರಿಗಳನ್ನು ನಿಯೋಜಿಸಬೇಕು. ಈ ನಿರ್ದೇಶನಗಳನ್ನು ಕಾರ್ಯಗತಗೊಳಿಸಿದ ಬಗ್ಗೆ ಅನುಸರಣೆ ವರದಿ ಸಲ್ಲಿಸಬೇಕು’ ಎಂದು ಬಿಬಿಎಂಪಿಗೆ ಪೀಠ ನಿರ್ದೇಶನ ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.