ADVERTISEMENT

ಒಡಿಶಾದಿಂದ ಗಾಂಜಾ: ತಿಂಡಿ ಹೆಸರಿನಲ್ಲಿ ಮಾರಾಟ; ಆರೋಪಿಯ ಬಂಧನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 14:22 IST
Last Updated 17 ಸೆಪ್ಟೆಂಬರ್ 2023, 14:22 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಒಡಿಶಾದಿಂದ ರೈಲಿನಲ್ಲಿ ಗಾಂಜಾ ತರಿಸಿ ನಗರದಲ್ಲಿ ಮಾರುತ್ತಿದ್ದ ಆರೋಪಿ ಪ್ರವೀಣ್‌ನನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೋರಮಂಗಲ ನಿವಾಸಿ ಪ್ರವೀಣ್, ಒಡಿಶಾದ ಪೆಡ್ಲರ್‌ಗಳ ಜೊತೆ ಒಡನಾಟವಿಟ್ಟುಕೊಂಡಿದ್ದ. ಅವರ ಮೂಲಕ ರೈಲಿನಲ್ಲಿ ಗಾಂಜಾ ತರಿಸಿ ಮಾರುತ್ತಿದ್ದ. ಈತನನ್ನು ಬಂಧಿಸಿ ₹ 12 ಲಕ್ಷ ಮೌಲ್ಯದ 20 ಕೆ.ಜಿ 280 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಒಡಿಶಾದಿಂದ ರೈಲಿನಲ್ಲಿ ಆಗಾಗ ನಗರಕ್ಕೆ ಬರುತ್ತಿದ್ದ ಪೆಡ್ಲರ್‌ಗಳು, ರೈಲು ನಿಲ್ದಾಣದಲ್ಲಿ ಆರೋಪಿಗೆ ಭೇಟಿ ಆಗುತ್ತಿದ್ದರು. ಗಾಂಜಾ ಪೊಟ್ಟಣವನ್ನು ಆರೋಪಿಗೆ ಕೊಟ್ಟು ಹಣ ಪಡೆದು ವಾಪಸು ಹೋಗುತ್ತಿದ್ದರು. ಅದೇ ಗಾಂಜಾವನ್ನು ಆರೋಪಿ ತಮ್ಮ ಮನೆ ಹಾಗೂ ಇತರೆ ಜಾಗಗಳಲ್ಲಿ ಬಚ್ಚಿಡುತ್ತಿದ್ದ.’

‘ತಿಂಡಿ ಪೂರೈಕೆ ಮಾಡುವ ಪೊಟ್ಟಣಗಳಲ್ಲಿ ಗಾಂಜಾ ತುಂಬುತ್ತಿದ್ದ. ತಿಂಡಿ ಮಾರಾಟದ ಸೋಗಿನಲ್ಲಿ ಪರಿಚಯಸ್ಥ ಗ್ರಾಹಕರಿಗೆ ಗಾಂಜಾ ತಲುಪಿಸುತ್ತಿದ್ದ. ಹೀಗಾಗಿ, ಈತನ ಕೃತ್ಯದ ಬಗ್ಗೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಈತನಿಂದ 52 ಖಾಲಿ ಪೊಟ್ಟಣಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿವೆ.

‘ಆಟೊದಲ್ಲಿ ಸುತ್ತಾಡುತ್ತಿದ್ದ ಆರೋಪಿ, ವಿವೇಕನಗರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಗಾಂಜಾ ಮಾರುತ್ತಿದ್ದ. ಕೆಲ ವಿದ್ಯಾರ್ಥಿಗಳು, ಕೆಲ ಕಾರ್ಮಿಕರು ಹಾಗೂ ಇತರರು ಆರೋಪಿ ಬಳಿ ಗಾಂಜಾ ಖರೀದಿಸುತ್ತಿದ್ದರು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.