ಬೆಂಗಳೂರು: ಮೊಬೈಲ್ ಆ್ಯಪ್ ಮೂಲಕ ನಕಲಿ ಜಿಪಿಎಸ್ ಸೃಷ್ಟಿಸಿ ಗ್ರಾಹಕರ ಸೋಗಿನಲ್ಲಿ ಕ್ಯಾಬ್ ಬುಕ್ಕಿಂಗ್ ಮಾಡಿ ಓಲಾ ಕಂಪನಿಯನ್ನು ವಂಚಿಸುತ್ತಿದ್ದ ಆರೋಪದಡಿ ಬಂಧಿಸಲಾಗಿರುವ ಆರೋಪಿಯೊಬ್ಬನಿಗೆ ಕೊರೊನಾ ಇರುವುದು ಶುಕ್ರವಾರ ದೃಢಪಟ್ಟಿದೆ.
ಓಲಾ ಕಂಪನಿ ಪ್ರತಿನಿಧಿ ನೀಡಿದ್ದ ದೂರು ಆಧರಿಸಿ ಸಿಸಿಬಿ ಪೊಲೀಸರು, ಭರತ್ ನಗರದ ನಾಗೇಶ್ (36), ಹೊಸಕೆರೆಹಳ್ಳಿ ರವಿ (21) ಬಸಾಪುರದ ಮನು (27) ಹಾಗೂ ಕೆಂಪೇಗೌಡ ನಗರದ ಸತೀಶ್ (32) ಎಂಬುವರನ್ನು ಬಂಧಿಸಿದ್ದರು. ನಾಲ್ವರ ಗಂಟಲಿನ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿತ್ತು.
ಇವರ ಪೈಕಿ ಒಬ್ಬಾತನ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಇದರಿಂದಾಗಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯನ್ನು ತಾತ್ಕಾಲಿಕವಾಗಿ ಸೀಲ್ಡೌನ್ ಮಾಡಲಾಗಿದೆ. ಶುಕ್ರವಾರ ಇಡೀ ಕಚೇರಿಯನ್ನು ಸ್ಯಾನಿಟೈಸಿಂಗ್ ಮಾಡಲಾಯಿತು.
ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಇಬ್ಬರು ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಜೊತೆಗೆ ದ್ವಿತೀಯ ಸಂಪರ್ಕ ಇಟ್ಟುಕೊಂಡಿದ್ದವರನ್ನು ಬಿಬಿಎಂಪಿ ಹಾಗೂ ಆರೋಗ್ಯ ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ.
ಪಾದರಾಯನಪುರದಲ್ಲಿ ನಡೆದ ಗಲಾಟೆ ಆರೋಪಿಗಳನ್ನು ಬಂಧಿಸಿದ್ದ ತಂಡದಲ್ಲಿ ಸಿಸಿಬಿ ಪೊಲೀಸರು ಇದ್ದರು. ಆರೋಪಿಗಳಿಗೆ ಕೊರೊನಾ ಇರುವುದು ದೃಢಪಟ್ಟಿದ್ದರಿಂದ ಎಲ್ಲ ಪೊಲೀಸರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಎಲ್ಲರ ವರದಿ ನೆಗಟಿವ್ ಬಂದಿತ್ತು. ಈಗ ಪುನಃ ಸಿಸಿಬಿ ಪೊಲೀಸರು ಬಂಧಿಸಿರುವ ಆರೋಪಿಗೆ ಕೊರೊನಾ ಇರುವುದು ಖಾತ್ರಿಯಾಗುತ್ತಿದ್ಧಂತೆ, ಪುನಃ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.