ADVERTISEMENT

ಟೋಲ್‌ ಸಂಗ್ರಹಕ್ಕೆ ವಿರೋಧ: ಸರ್ವೀಸ್‌ ರಸ್ತೆ ನಿರ್ಮಿಸಲು ಸ್ಥಳೀಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 21:06 IST
Last Updated 11 ಜನವರಿ 2024, 21:06 IST
ಸ್ಥಳೀಯರಿಗೆ ಟೋಲ್‌ ಶುಲ್ಕದಿಂದ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ಸೋಮನಹಳ್ಳಿ ಗೇಟ್‌ ಬಳಿ ಬುಧವಾರ ರೈತ ಸಂಘದ ನೇತೃತ್ವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸ್ಥಳೀಯರಿಗೆ ಟೋಲ್‌ ಶುಲ್ಕದಿಂದ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ಸೋಮನಹಳ್ಳಿ ಗೇಟ್‌ ಬಳಿ ಬುಧವಾರ ರೈತ ಸಂಘದ ನೇತೃತ್ವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.   

ಬೆಂಗಳೂರು: ಕನಕಪುರ ರಸ್ತೆಯ ಸೋಮನಹಳ್ಳಿ ಬಳಿ ನಿರ್ಮಾಣ ಹಂತದಲ್ಲಿರುವ ಟೋಲ್ ಸಂಗ್ರಹ ಕೇಂದ್ರದಲ್ಲಿ ಸ್ಥಳೀಯ ವಾಹನ ಸವಾರರಿಗೆ ಪ್ರತ್ಯೇಕ ಸರ್ವಿಸ್ ರಸ್ತೆ ನಿರ್ಮಿಸದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಕ್ರಮವನ್ನು ಖಂಡಿಸಿ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಕಗ್ಗಲಿಪುರ ಘಟಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೋಮನಹಳ್ಳಿ, ನೆಲಗುಳಿ, ತರಳು ಸೇರಿದಂತೆ ವಿವಿಧ ಹಳ್ಳಿಗಳ ಸಾರ್ವಜನಿಕರು ಭಾಗವಹಿಸಿದ್ದರು.

‘ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನಿನಗರ, ಮುಕ್ಕೋಡ್ಲು, ಗಿರಿಗೌಡನ ದೊಡ್ಡಿ, ತೋಪೂರು, ಗಾಡಿ ಪಾಳ್ಯ, ನೆಲಗುಳಿ ಪಂಚಾಯಿತಿ ವ್ಯಾಪ್ತಿಯ ನಾಗನಾಯಕನಹಳ್ಳಿ, ಬೋಳಾರೆ, ಜಟ್ಟಿಪಾಳ್ಯ, ಕೆರೆ ಚೂಡಹಳ್ಳಿ ಮತ್ತು ತರಳು ಗ್ರಾಮ ಪಂಚಾಯಿತಿಯ ತಟಗುಪ್ಪೆ ಗ್ರಾಮಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಟೋಲ್‌ ನಿರ್ಮಾಣವಾದರೆ ಕಗ್ಗಲಿಪುರ ಮತ್ತು ಬೆಂಗಳೂರು ನಗರಕ್ಕೆ ತೆರಳ ಬೇಕಾದರೆ ಟೋಲ್‌ ಶುಲ್ಕ ಪಾವತಿಸಿ ಹೋಗಬೇಕಾದ ಅನಿವಾರ್ಯತೆ ಎದುರಾಗಲಿದೆ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

ಇಲ್ಲಿ ನಿರ್ಮಿಸುತ್ತಿರುವ ಟೋಲ್ ಕೇಂದ್ರದಲ್ಲಿ ಸ್ಥಳೀಯ ವಾಹನ ಸವಾರರಿಗೆ ಪ್ರತ್ಯೇಕ ಸರ್ವೀಸ್‌ ರಸ್ತೆ ನಿರ್ಮಿಸ ಕೊಡುವವರೆಗೂ ಸ್ಥಳೀಯ ವಾಹನಗಳಿಂದ ಟೋಲ್‌ ಸಂಗ್ರಹಿಸಬಾರದು ಎಂದು ನಿರ್ಮಾಣ ಹಂತದಲ್ಲಿ ಟೋಲ್‌ ಸಂಗ್ರಹ ಕೇಂದ್ರಕ್ಕೆ ಪ್ರತಿಭಟನಾಕಾರರು ಫಲಕ ಅಳವಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಕಗ್ಗಲಿಪುರ ರೈತ ಸಂಘದ ಅಧ್ಯಕ್ಷ ನದೀಮ್ ಪಾಷ, ರೈತರಾದ ಮಂಜುನಾಥ್, ವೆಂಕಟೇಶ್, ಶ್ರೀನಿವಾಸ್, ಸೋಮನಹಳ್ಳಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಕೇಶವಮೂರ್ತಿ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.