ಬೆಂಗಳೂರು: ‘ರಾಜಾಡಳಿತ ಕಾಲದಲ್ಲಿ ದಲಿತರು ಬದುಕುವುದೇ ಕಷ್ಟವಾಗಿತ್ತು. ಸತ್ತ ದನಗಳನ್ನು ತಿಂದು ಬದುಕಿದ್ದರು. ಇಲ್ಲದಿದ್ದರೆ ಹುಳಗಳು ಸಾಯುವಂತೆ ನಮ್ಮ ಪೂರ್ವಜರು ಸಾಯುತ್ತಿದ್ದರು’ ಎಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಹೇಳಿದರು.
ಸಮತಾ ಸೈನಿಕ ದಳದಿಂದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 139ನೇ ಜಯಂತಿ, ಡಾ.ಎಂ. ವೆಂಕಟಸ್ವಾಮಿ ಅವರ 69ನೇ ಹುಟ್ಟುಹಬ್ಬದ ಪ್ರಯುಕ್ತ ಟೌನ್ಹಾಲ್ನಲ್ಲಿ ಭಾನುವಾರ ನಡೆದ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದರು.
ಭೂಮಾಲೀಕರು ಮಾತ್ರ ಆ ಕಾಲದಲ್ಲಿ ನೆಮ್ಮದಿಯಾಗಿದ್ದರು. ಜನಸಂಖ್ಯೆಯ ಶೇ 25ರಷ್ಟು ಇರುವ ದಲಿತರನ್ನು ವಿದ್ಯೆ, ಸಂಪತ್ತಿನಿಂದ ಹೊರಗಿಡಲಾಗಿತ್ತು. ಭೂಮಿಯನ್ನೂ ಹೊಂದುವಂತಿರಲಿಲ್ಲ. ನೀರು ಕೊಡುತ್ತಿರಲಿಲ್ಲ. ಭವ್ಯ ಭಾರತದ ಇತಿಹಾಸ ಎನ್ನುವವರಿಗೆ, ಗೋವು ಪವಿತ್ರ ಎನ್ನುವವರಿಗೆ ಈ ಸತ್ಯಗಳು ಗೊತ್ತಿಲ್ಲ ಎಂದು ವಿಷಾದಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಪಠ್ಯದಲ್ಲಿ ಬೋಧಿಸಬೇಕು. ಪಠ್ಯದಲ್ಲಿ ಮೌಢ್ಯಗಳನ್ನು ನೀಡಬಾರದು. ವೈಜ್ಞಾನಿಕ ಚಿಂತನಾ ಕ್ರಮ ಬರಬೇಕು ಎಂದು ಅವರು ಆಗ್ರಹಿಸಿದರು.
ಸಮತಾ ಸೈನಿಕ ದಳದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಅವರು, ‘ಪಂಚಾಯತ್, ಸರ್ಕಾರಿ ಕಚೇರಿಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಆಚರಿಸಲು ಆದೇಶ ಹೊರಡಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಒಡೆಯರ್ ಅಧ್ಯಯನ ಪೀಠ ಸ್ಥಾಪಿಸಬೇಕು. ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ಎಸ್ಸಿ, ಎಸ್ಟಿ ಸಮುದಾಯದ ಭೂಮಿ ಹಕ್ಕು ರಕ್ಷಿಸಬೇಕು’ ಎಂದು ಆಗ್ರಹಿಸಿದರು.
ಬರಹಗಾರ ಎನ್.ಆರ್. ಶಿವರಾಂ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ‘ಸಾಮಾಜಿಕ ನ್ಯಾಯ ಪರಿವರ್ತನೆಯ ಪ್ರವರ್ತಕ‘ ಪುಸ್ತಕ ಬಿಡುಗಡೆ ಮಾಡಲಾಯಿತು. ಸಾಹಿತಿ ಬಿ.ಟಿ. ಲಲಿತಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಬಿಕ್ಕು ಸಂಘದ ಜ್ಞಾನಲೋಕ ಬಂತೆ, ಡಿಸಿಪಿ ಸಿದ್ದರಾಜು, ಎ.ಬಿ.ಹೊಸಮನೆ, ಎಚ್.ಎಂ.ನಾರಾಯಣಸ್ವಾಮಿ, ಲೋಲಾಕ್ಷ ಅವರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.