ADVERTISEMENT

ಪಾದರಾಯನಪುರಕ್ಕೆ ಹೋಗಲು ಸಿಬ್ಬಂದಿ ಹಿಂದೇಟು

ವೈದ್ಯಕೀಯ ತಂಡಕ್ಕೆ ತರಬೇತಿ ನೀಡಿ ಗಂಟಲು ದ್ರವ ಮಾದರಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 15 ಮೇ 2020, 19:14 IST
Last Updated 15 ಮೇ 2020, 19:14 IST
ಪಾದರಾಯನಪುರದಲ್ಲಿ ಮಹಿಳೆಯೊಬ್ಬರು ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ಸರಿಸಿ ಮುಂದೆ ಹೋಗುತ್ತಿರುವುದು
ಪಾದರಾಯನಪುರದಲ್ಲಿ ಮಹಿಳೆಯೊಬ್ಬರು ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ಸರಿಸಿ ಮುಂದೆ ಹೋಗುತ್ತಿರುವುದು    

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಪಾದರಾಯನಪುರದಲ್ಲಿ (ಹಾಟ್‌ಸ್ಪಾಟ್‌) ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಲು ಬಿಬಿಎಂಪಿ ಆರೋಗ್ಯ ವಿಭಾಗದ ಕೆಲವು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ.ಶುಕ್ರವಾರ ಕೇವಲ 14 ಸಿಬ್ಬಂದಿ ಎರಡು ತಂಡಗಳಲ್ಲಿ 15 ಮಂದಿಯ ಗಂಟಲು ದ್ರವದ ಮಾದರಿ ಸಂಗ್ರಹಿಸಿದ್ದಾರೆ.

ತ್ವರಿತವಾಗಿ ಮತ್ತು ಹೆಚ್ಚಿನ ಜನರನ್ನು ಆರೋಗ್ಯ ತಪಾಸಣೆ ಹಾಗೂ ಗಂಟಲು ದ್ರವದ ಮಾದರಿ ಸಂಗ್ರಹಿಸಲು ಬಿಬಿಎಂಪಿ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಆರೋಗ್ಯ ಸಿಬ್ಬಂದಿ ಸ್ಥಳಕ್ಕೆ ಬರಲು ಹಿಂದೇಟು ಹಾಕಿದ್ದರಿಂದ,ಏಳು ಮಂದಿಯ ವೈದ್ಯಕೀಯ ತಂಡಕ್ಕೆ ಪಾದರಾಯನಪುರದಲ್ಲಿಯೇ ತರಬೇತಿ ನೀಡಿ ಮಾದರಿ ಸಂಗ್ರಹಿಸುವ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಗಂಟಲು ದ್ರವದ ಮಾದರಿ ಸಂಗ್ರಹಿಸುವ ಕುರಿತು ತರಬೇತಿ ಹೊಂದಿರುವ ಸಿಬ್ಬಂದಿ ನೀಡುವಂತೆ ಪಾಲಿಕೆಯ ಕ್ಲಿನಿಕಲ್ ವಿಭಾಗಕ್ಕೆ ಮನವಿ ಮಾಡಿದರೂ ಸಿಬ್ಬಂದಿ ನಿಯೋಜನೆಯಾಗಿಲ್ಲ. ಹೀಗಾಗಿ, ತಡವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ADVERTISEMENT

ಪರೀಕ್ಷೆಗೆ ಒಪ್ಪದ ಜನ: ‘ಪಾದರಾಯನಪುರದಲ್ಲಿ ಸಾರ್ವಜನಿಕರು ಆರೋಗ್ಯ ತಪಾಸಣೆಗೆ ಹಾಗೂ ಗಂಟಲು ದ್ರವದ ಮಾದರಿ ನೀಡುವುದಕ್ಕೆ ಒಪ್ಪುತ್ತಿಲ್ಲ. ನಾವು ಆರೋಗ್ಯವಾಗಿದ್ದೇವೆ. ನಮಗೆ ಯಾವುದೇ ಪರೀಕ್ಷೆ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ’ ಎಂದು ವೈದ್ಯಕೀಯ ತಂಡದ ಸದಸ್ಯರೊಬ್ಬರು ಹೇಳಿದರು.

‘ಸ್ಥಳೀಯರ ಮನವೊಲಿಸಿಗಂಟಲು ದ್ರವದ ಮಾದರಿ ಸಂಗ್ರಹಿಸಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಮನೋರಂಜನ್ ಹೆಗ್ಡೆ, ’ಶುಕ್ರವಾರ ಎರಡು ತಂಡದಲ್ಲಿ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗಿದೆ. ಈ ಕಾರ್ಯವನ್ನು ಶನಿವಾರದಿಂದ ಮತ್ತಷ್ಟು ಚುರುಕುಗೊಳಿಸಲಾಗುವುದು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.