ADVERTISEMENT

ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆ ನೀಡಿ

ಶಾಸಕರು, ಸಚಿವರಿಗೆ ನಗರದ ಪತ್ರಿಕಾ ವಿತರಕರ ಮನವಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 21:30 IST
Last Updated 15 ಜುಲೈ 2020, 21:30 IST
ವಸತಿ ಸಚಿವ ವಿ.ಸೋಮಣ್ಣ ಅವರಿಗೆ ವಿಜಯನಗರ ವ್ಯಾಪ್ತಿಯ ಪತ್ರಿಕಾ ವಿತರಕರು ಮನವಿ ಸಲ್ಲಿಸಿದರು. ವಿತರಕರಾದ ದೇವರಾಜ್, ವಿನೋದ್ ಕುಮಾರ್ ಹಾಗೂ ಕೆ.ಪಿ.ಮಂಜುನಾಥ್ ಇದ್ದರು
ವಸತಿ ಸಚಿವ ವಿ.ಸೋಮಣ್ಣ ಅವರಿಗೆ ವಿಜಯನಗರ ವ್ಯಾಪ್ತಿಯ ಪತ್ರಿಕಾ ವಿತರಕರು ಮನವಿ ಸಲ್ಲಿಸಿದರು. ವಿತರಕರಾದ ದೇವರಾಜ್, ವಿನೋದ್ ಕುಮಾರ್ ಹಾಗೂ ಕೆ.ಪಿ.ಮಂಜುನಾಥ್ ಇದ್ದರು   

ಬೆಂಗಳೂರು: ಕೊರೊನಾ ಸಂದರ್ಭದಲ್ಲೂ ಮನೆ ಮನೆಗಳಿಗೆ ದಿನಪತ್ರಿಕೆ ತಲುಪಿಸುತ್ತಿರುವ ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆ ಹಾಗೂ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸ್ಥಳೀಯ ಶಾಸಕರು ಹಾಗೂ ಸಚಿವರಿಗೆ ನಗರದ ಪತ್ರಿಕಾ ವಿತರಕರು ಮನವಿ ಸಲ್ಲಿಸಿದರು.

‘ಪತ್ರಕರ್ತರಿಗೆ ಸರ್ಕಾರ ಈಗಾಗಲೇ ವಿಮಾ ಸೌಲಭ್ಯ ಕಲ್ಪಿಸಿದೆ. ಇದೇ ಮಾದರಿಯ ವಿಮಾ ಸೌಲಭ್ಯವನ್ನು ಪತ್ರಿಕಾ ವಿತರಕರು, ಪತ್ರಿಕೆ ಹಂಚುವವರು ಹಾಗೂ ಪತ್ರಿಕೆಗಳ ಮಾರಾಟ ಮಾಡುವವರಿಗೂ ಘೋಷಿಸಬೇಕು’ ಎಂದು ಬೆಂಗಳೂರು ನಗರ ಪತ್ರಿಕಾ ವಿತರಕರ ಬಳಗದ ಅಧ್ಯಕ್ಷ ಎನ್.ದೇವರಾಜ್ ಒತ್ತಾಯಿಸಿದರು.

‘ಕೊರೊನಾ ಸೋಂಕಿನ ನಡುವೆಯೂ ಪತ್ರಿಕಾ ವಿತಕರರು ಎದೆಗುಂದದೆ ಜನರಿಗೆ ಮಾಹಿತಿ ತಲುಪಿಸುವ ಸಲುವಾಗಿ ದಿನಪತ್ರಿಕೆಗಳನ್ನು ಹಂಚುತ್ತಿದ್ದಾರೆ. ನಗರದಲ್ಲಿರುವ 3 ಸಾವಿರಕ್ಕೂ ಹೆಚ್ಚಿನ ಪತ್ರಿಕಾ ವಿತರಕರ ಕೆಳಗೆ 15 ಸಾವಿರಕ್ಕೂ ಹೆಚ್ಚು ಪತ್ರಿಕೆ ಹಂಚುವ ಹುಡುಗರು ಕೆಲಸ ಮಾಡುತ್ತಿದ್ದಾರೆ. ಅಸಂಘಟಿತರಾಗಿರುವ ಇವರಿಗೆ ಬರುವ ಅಲ್ಪ ಸಂಬಳವೇ ಜೀವನ ನಿರ್ವಹಣೆಗೆ ಸಾಲುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ನಗರದಲ್ಲಿ ಪತ್ರಿಕೆಗಳನ್ನು ಮಾರಾಟ ಮಾಡುವ 1,500ಕ್ಕೂ ಹೆಚ್ಚು ಮಳಿಗೆಗಳಿವೆ. ಕೊರೊನಾ ಸೋಂಕಿನಿಂದ ಮಳಿಗೆಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಸರ್ಕಾರವೇ ಇವರ ನೆರವಿಗೆ ಧಾವಿಸಬೇಕಿದೆ’ ಎಂದರು.

‘ಪತ್ರಿಕೆ ವಿತರಿಸುವ ಹುಡುಗರು ಕೊರೊನಾ ಕಾರಣಕ್ಕೆ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಪತ್ರಿಕಾ ವಿತರಕರ ಕಷ್ಟ ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ’ ಎಂದು ಯಲಹಂಕ ವಲಯದ ದಿನಪತ್ರಿಕೆ ವಿತರಕರ ಸಂಘದ ಅಧ್ಯಕ್ಷ ಎಂ.ಸತೀಶ್ ಅಳಲು ತೋಡಿಕೊಂಡರು.

‘ಪತ್ರಿಕಾ ವಿತರಕರು ಹಾಗೂ ಕೆಲಸಗಾರರಿಗೆ ಕನಿಷ್ಠ ವೇತನ ಸೌಲಭ್ಯವಿಲ್ಲ. ಒಂದು ವೇಳೆ ಈ ವೃತ್ತಿಯಲ್ಲಿ ತೊಡಗಿರುವವರಿಗೆ ಸೋಂಕು ತಗುಲಿದರೆ, ಅದರ ಚಿಕಿತ್ಸಾ ವೆಚ್ಚ ಭರಿಸಲೂ ಅವರಿಂದ ಸಾಧ್ಯವಿಲ್ಲ. ಇವರನ್ನೇ ಆಶ್ರಯಿಸಿರುವ ಕುಟುಂಬಗಳು ಸಂಕಷ್ಟದಲ್ಲಿವೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ಪತ್ರಿಕಾ ವಿತರಕರು ಕೆಲಸ ಮಾಡಬೇಕಿದೆ’ ಎಂದು ವಿವರಿಸಿದರು.

‘ವಿಮೆ ಸೌಲಭ್ಯದ ಜೊತೆಗೆ ಕೆಲಸಗಾರರಿಗೆ ಉಚಿತ ಚಿಕಿತ್ಸೆ ಸಿಗುವಂತಾಗಬೇಕು. ಆಟೊ, ಟ್ಯಾಕ್ಸಿ ಚಾಲಕರು ಸೇರಿ ವಿವಿಧ ಶ್ರಮಿಕ ವರ್ಗಗಳಿಗೆ ನೆರವು ಘೋಷಿಸುವಂತೆ ಕೊರೊನಾ ಮುಗಿಯುವವರೆಗೆ ಪತ್ರಿಕಾ ವಿತರಕರಿಗೆ ಸರ್ಕಾರ ನೆರವು ಘೋಷಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.