ADVERTISEMENT

ಮರಗಳಿಲ್ಲದೇ ನೀರಿಲ್ಲ: ಶನಿವಾರ ಅಭಿಯಾನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 20:11 IST
Last Updated 22 ಫೆಬ್ರುವರಿ 2019, 20:11 IST

ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಫೆ. 23ರಂದು ವಿವಿಧ ಸಂಘಟನೆಗಳು ಪರಿಸರವಾದಿಗಳ ನೇತೃತ್ವದಲ್ಲಿ ‘ಮರಗಳಿಲ್ಲದೆ ನೀರಿಲ್ಲ’ ಎಂಬಸಂಯುಕ್ತ ಸಂರಕ್ಷಣಾ ಅಭಿಯಾನ ಹಮ್ಮಿಕೊಂಡಿವೆ.

ಬಹಳಷ್ಟು ನದಿಗಳ ಮೂಲ ಪಶ್ಚಿಮ ಘಟ್ಟದಲ್ಲಿದೆ. ಅಲ್ಲಿಯೇ ಪರಿಸರ ನಾಶ ಉಂಟಾದರೆ ಮುಂದೆ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಲಿದೆ. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಲವು ಅವೈಜ್ಞಾನಿಕ ಅಭಿವೃದ್ಧಿ ಯೋಜನೆಗಳಿಗಾಗಿ ಸುಮಾರು 21 ಲಕ್ಷ ಮರ ಕಡಿಯುವುದನ್ನು ತಡೆಯುವುದು, ಯುವಜನತೆಯನ್ನು ಒಟ್ಟಿಗೆ ಕರೆತಂದು ನೀರಿನ ಭವಿಷ್ಯಕ್ಕೆ ಎದುರಾಗುತ್ತಿರುವ ಅಪಾಯದ ಬಗ್ಗೆ ಅರಿವು ಮೂಡಿಸುವುದು ಈ ಅಭಿಯಾನದ ಉದ್ದೇಶ ಎಂದು ಸಂಘಟಕರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ವಿಷಯಾಧಾರಿತ ಭಾಷಣಗಳು ನಡೆಯಲಿವೆ.ನೀರಿನ ಭದ್ರತೆ, ಕಾವೇರಿ ಬೋಗುಣಿ ಪ್ರದೇಶದ ಮೇಲೆ ಬೃಹತ್ ಯೋಜನೆಗಳ ಪ್ರಭಾವ, 21 ಲಕ್ಷ ಮರಗಳ ಮೇಲೆ ದುಷ್ಪರಿಣಾಮ ಬೀರುವ ಅವೈಜ್ಞಾನಿಕ ರಸ್ತೆ ವಿಸ್ತರಣೆ ಕುರಿತು ತಜ್ಞರು ಮಾತನಾಡಲಿದ್ದಾರೆ.ಅಭಿವೃದ್ಧಿಯ ಪರಿಣಾಮ ಏನೇನಾಗಬಹುದು ಎಂಬುದರ ಬಗ್ಗೆ ಚಿತ್ರಣ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.

ADVERTISEMENT

ಸಂರಕ್ಷಣಾ ಕ್ಷೇತ್ರಗಳ ಛಾಯಾಚಿತ್ರ ಪ್ರದರ್ಶನ, ಇವುಗಳೊಂದಿಗೆ ಮೂರು ಸಾಲುಗಳ ಕಿರುಕಥೆ ಇರಲಿದೆ.ಸರ್ಕಾರಕ್ಕೆ ಸಲ್ಲಿಸಬೇಕಾದ ದಾಖಲೆಗಳ ಕರಡು ರೂಪಿಸಲಾಗುವುದು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಈ ಮೂಲಕ ಪ್ರಬಲ ಸಂದೇಶವನ್ನು ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.