ಬೆಂಗಳೂರು: ನಗರದಲ್ಲಿ ಡೆಂಗಿ, ಚಿಕೂನ್ ಗುನ್ಯ, ಜ್ವರ ಹೆಚ್ಚಾಗಿದ್ದು, ರೋಗಗಳ ತಡೆಗೆ ಫಾಗಿಂಗ್ ಮಾಡಿರುವ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು’ ಎಂದು ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ಉಸ್ತುವಾರಿ ಅಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಸೂಚಿಸಿದರು.
ರಾಜರಾಜೇಶ್ವರಿನಗರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಅಧಿಕಾರಿಯ ಗೈರು ಹಾಜರಿಗೆ ಅಸಮಾಧಾನ ವ್ಯಕ್ತಪಡಿಸಿದರು.
‘ಬಡವರು, ಮಧ್ಯಮದ ವರ್ಗದವರೇ ಹೆಚ್ಚಾಗಿ ವಾಸಿಸುವ ಕೊಳೆಗೇರಿ ಪ್ರದೇಶಗಳಲ್ಲಿ ಹೆಚ್ಚಿನ ಜನರು ಅನಾರೋಗ್ಯಪೀಡಿತರಾಗಿದ್ದಾರೆ. ಅದರ ಮಾಹಿತಿ ನಿಮಗೆ ತಿಳಿದಿದೆಯೇ, ಎಷ್ಟು ಬಾರಿ ಫಾಗಿಂಗ್ ಮಾಡಲಾಗಿದೆ, ಎಷ್ಟೆಷ್ಟು ಔಷಧೋಪಚಾರ ಒದಗಿಸಲಾಗಿದೆ ಎಂಬ ವಿಷಯ ನಿಮ್ಮ ಗಮನದಲ್ಲಿದೆಯೇ’ ಎಂದೂ ಪ್ರಶ್ನಿಸಿದರು.
‘ತೋಟಗಾರಿಕೆ ಮತ್ತು ಆರಣ್ಯ ಇಲಾಖೆಯವರು ಸಾವಿರಾರು ಸಸಿಗಳನ್ನು ನೆಟ್ಟಿದ್ದೇವೆ ಎಂದು ಪ್ರತಿವರ್ಷ ಮಾಹಿತಿ ನೀಡುತ್ತಾರೆ. ಸಸಿಗಳನ್ನು ಎಲ್ಲಿ ನೆಡಲಾಗಿದೆ’ ಎಂದು ಕೇಳಿದರು.
ಉಪ ಆಯುಕ್ತ ಕೆ.ಶಿವೇಗೌಡ ಮಾತನಾಡಿ, ಟ್ಯಾಂಗ್ಲಿನ್ ಡೆವಲಪರ್ಸ್ ₹5.56 ಕೋಟಿ, ಲೀಲಾ ಸ್ಕಾಟಿಸ್ಲೇಸ್ ₹1.3 ಕೋಟಿ, ಸರ್ಕಾರಿ ಸಂಸ್ಥೆಗಳು ₹98ಲಕ್ಷ, ಬಿಎಂಟಿಸಿ ₹92 ಲಕ್ಷ, ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ₹ 65ಲಕ್ಷ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ₹ 55ಲಕ್ಷ, ಮಣಿಪಾಲ್ ಆಸ್ಪತ್ರೆ ₹ 48 ಲಕ್ಷ, ದೊಡ್ಡ ಕಾರ್ಖಾನೆಗಳ ಮಾಲೀಕರು ₹18 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.
ಹಲವಾರು ಬಾರಿ ನೋಟಿಸ್ ನೀಡಿದರೂ ಉತ್ತರ ನೀಡಿಲ್ಲ’ ಎಂದರು. ಈ ಸಂಸ್ಥೆಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಿ. ಬಾಕಿ ವಸೂಲಿ ಮಾಡಿ ಎಂದು ತ್ರಿಲೋಕಚಂದ್ರ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.