ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಜಗದೀಶ್ (29) ಎಂಬುವರನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಕೋಡಿಚಿಕ್ಕನಹಳ್ಳಿಯ ವಿಜಯಶ್ರೀ ಲೇಔಟ್ ನಿವಾಸಿ ಜಗದೀಶ್, ತಮ್ಮ ತಂದೆ ಧನಪಾಲ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ವಿಚಾರವಾಗಿ ಗಲಾಟೆ ಮಾಡಿ ವೈದ್ಯನ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಆಸ್ಪತ್ರೆಯ ಆಸ್ಪತ್ರೆ ಆಡಳಿತಾಧಿಕಾರಿ ಪ್ರವೀಣ್ ವಾಲಿ ದೂರು ನೀಡಿದ್ದರು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಹೇಳಿದರು.
‘ಕೋವಿಡ್ನಿಂದ ಗುಣಮುಖರಾಗಿದ್ದ ಧನಪಾಲ್ ಕಪ್ಪು ಶೀಲಿಂದ್ರ ರೋಗಕ್ಕೆ ತುತ್ತಾಗಿದ್ದರು. ಅದರ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಆಸ್ಪತ್ರೆಗೆ ಬಂದಿದ್ದ ಜಗದೀಶ್ ಹಾಗೂ ಅವರ ತಾಯಿ, ವೈದ್ಯ ಪದ್ಮಕುಮಾರ್ ಹಾಗೂ ಶುಶ್ರೂಷಕಿ ಮಾಲಾ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ’ ಎಂದೂ ತಿಳಿಸಿದರು.
‘ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಹಾಗೂ ಆಸ್ಪತ್ರೆಗಳ ಹಾನಿ ತಡೆ ಕಾಯ್ದೆ 2009 ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.