ಬೆಂಗಳೂರು:‘ಕಾಡಿನ ಮೌನಕ್ಕೆ ಭಂಗ ತರುವ ಕೆಲಸಗಳು ನಡೆಯುತ್ತಿವೆ. ಇನ್ನು ನಾವೂ ಮೌನವಾಗಿದ್ದರೆ, ಪರಿಸರಕ್ಕೆ ಉಸಿರುಗಟ್ಟುವ ಪರಿಸ್ಥಿತಿ ಎದುರಾಗಲಿದೆ’ಎಂದು ಲೇಖಕ ನಾಗೇಶ್ ಹೆಗಡೆ ಎಚ್ಚರಿಸಿದರು.
ನಗರದಲ್ಲಿ ಶನಿವಾರ ಫೋಕಸ್ ಅಕಾಡೆಮಿ ಆಫ್ ಆರ್ಟ್ ಫೋಟೊಗ್ರಫಿ ಸಂಸ್ಥೆಆಯೋಜಿಸಿದ್ದ ಟಿ.ಎನ್.ಎ.ಪೆರು
ಮಾಳ್ ಮೆಮೊರಿಯಲ್ ಅವಾರ್ಡ್ ಮತ್ತು ವಾರ್ಷಿಕ ಛಾಯಾಚಿತ್ರಗಳ ಪ್ರದರ್ಶನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕಾಡು ನಮ್ಮನ್ನು ಮನುಷ್ಯರನ್ನಾಗಿಸಿ, ಓಡಲು, ಬದುಕಲು ಕಲಿಸಿದೆ. ಆದರೆ, ಇಂದು ಎತ್ತಿನಹೊಳೆ ಯೋಜನೆ ಮೂಲಕ ಪಶ್ಚಿಮಘಟ್ಟದ ಪರಿಸರವನ್ನು ಹಾಳುಗೆಡವಲು ಹೊರಟಿದ್ದಾರೆ. ಬಹುಪಾಲು ಜನರು ಬೇಕು ಎಂದ ಕಾರಣಕ್ಕೆ ಎತ್ತಿನಹೊಳೆ ಯೋಜನೆ ಜಾರಿಗೊಳಿಸುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಅಲ್ಲಿನ ಕಾಡು, ಗಿಡ, ಮರ, ಪ್ರಾಣಿಗಳ ಅಭಿಪ್ರಾಯಗಳನ್ನು ಸರ್ಕಾರ ಏಕೆ ಕೇಳಲಿಲ್ಲ’ ಎಂದು ಪ್ರಶ್ನಿಸಿದರು.
ವನ್ಯಜೀವಿ ಛಾಯಾಗ್ರಾಹಕ ಕೃಪಾಕರ, ‘ಪೆರುಮಾಳ್ ತೆಲುಗಿನವರಾಗಿದ್ದರೂ ಕುವೆಂಪು, ಬೇಂದ್ರೆಯಂತಹ ಕನ್ನಡ ಸಾಹಿತಿಗಳ ಕೃತಿಗಳನ್ನು ಓದುತ್ತಿದ್ದರು. ಅಪ್ರತಿಮ ಬಹುಮುಖ ವ್ಯಕ್ತಿತ್ವ ಅವರದ್ದು. ಆದರೆ, ರಾಜ್ಯ ಸರ್ಕಾರ ಅವರ ಸಾಧನೆಗಳನ್ನು ಗುರುತಿಸಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಪೆರುಮಾಳ್ ಅವರ ಪುತ್ರ ಟಿ.ಎ.ನಟರಾಜನ್ ಅಪ್ಪನ ಒಡನಾಟವನ್ನು ಸ್ಮರಿಸಿ ಕಣ್ಣೀರಿಟ್ಟರು. ಅಕಾಡೆಮಿ ಸದಸ್ಯರ ಸುಮಾರು 70 ಛಾಯಾಚಿತ್ರಗಳು ಪ್ರದರ್ಶನದಲ್ಲಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.