ಬೆಂಗಳೂರು: ಪ್ಲಾಸ್ಟಿಕ್ ಸ್ಟ್ರಾಗಳಿಗೆ ಬದಲಾಗಿ ಹರಳೆಲೆ ಕೊಳವೆಗಳು, ಬಿದಿರಿನ ಕಡ್ಡಿಗಳು, ಪೇಪರ್ ಪೈಪುಗಳು ಮಾರುಕಟ್ಟೆಗೆ ಬಂದಿವೆ.
ನಿಷೇಧಿತ ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವಾಗಿ ಉಪಯೋಗಿಸಬಹುದಾದ ಪರಿಸರ ಸ್ಹೇಹಿ ವಸ್ತುಗಳನ್ನು ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬಿಬಿಎಂಪಿಯು ಸ್ವಾತಂತ್ರ್ಯ ಉದ್ಯಾನದಲ್ಲಿ ಮೂರು ದಿನಗಳ ‘ವಿಶೇಷ ಮೇಳ’ ಆಯೋಜಿಸಿದೆ.
ಈ ಮೇಳದಲ್ಲಿ ಪ್ಲಾಸ್ಟಿಕ್ ವಸ್ತುಗಳಿಗೆ ಬದಲಾಗಿ ಬಳಸಬಹುದಾದ ತರಹೇವಾರಿ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಎಲೆಯೊಂದಿಗೆ ಉದುರಿ ಹೋಗುವ ಹರಳೆಲೆಯ ಕೊಳವೆಗಳನ್ನು ಸ್ಟ್ರಾ ರೂಪದಲ್ಲೂ ಬಳಸಬಹುದು ಎಂಬುದನ್ನು ಮುಕ್ತ ಫೌಂಡೇಷನ್ ತೋರಿಸಿಕೊಟ್ಟಿದೆ.
ಬಟ್ಟೆ ಬ್ಯಾಗ್ಗಳು, ಪರ್ಸ್ಗಳು, ಬಿದಿರಿನಲ್ಲಿ ತಯಾರಿಸಿದ ಸ್ಟ್ರಾಗಳು, ಮೊಬೈಲ್ ಸ್ಟ್ಯಾಂಡ್ಗಳು, ಟೂತ್ ಬ್ರೆಷ್ಗಳು, ತೆಂಗಿನ ಚಿಪ್ಪಿನಲ್ಲಿ ತಯಾರಿಸಿದ ಕಾಫಿ ಕಪ್ಗಳು, ಮಕ್ಕಳಿಗೆ ಬೇಕಾದ ಆಟಿಕೆಗಳು, ಮನೆಗೆ ಬೇಕಾದ ಅಲಂಕಾರಿಕ ವಸ್ತುಗಳನ್ನು ಕೂಡ ಪೇಪರ್ ಮತ್ತು ಮರ ಕಡ್ಡಿಗಳಲ್ಲಿ ತಯಾರಿಸಿರುವ 50ಕ್ಕೂ ಹೆಚ್ಚು ಮಳಿಗೆಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಬೀಡು ಬಿಟ್ಟಿವೆ.
ಮೇಳವನ್ನು ಉದ್ಘಾಟಿಸಿದ ಮೇಯರ್ ಗಂಗಾಂಬಿಕೆ, ‘ಪ್ಲಾಸ್ಟಿಕ್ಗೆ ಪರ್ಯಾಯ ವಸ್ತುಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ಬೆಳಿಗ್ಗೆ 9ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ’ ಎಂದು ಹೇಳಿದರು.
‘ಪಾಲಿಕೆಯಿಂದ ಹಂತ–ಹಂತವಾಗಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಾಗುತ್ತಿದೆ. ಹೋಟೆಲ್ಗಳಲ್ಲಿ ಪಾರ್ಸೆಲ್ ಕೊಡಲು ಬಳಕೆ ಮಾಡುವ ಪ್ಲಾಸ್ಟಿಕ್ ಕಂಟೇನರ್ ಬದಲಿಗೆ ಕಬ್ಬಿನ ತ್ಯಾಜ್ಯದಿಂದ ತಯಾರಿಸಿದ ಬಾಕ್ಸ್ಗಳಿದ್ದು, ಇನ್ನು ಮುಂದೆ ಎಲ್ಲರೂ ಅದನ್ನೇ ಬಳಕೆ ಮಾಡಬೇಕು. ಇಲ್ಲವಾದರೆ ಹೋಟೆಲ್ ಪರವಾನಗಿ ರದ್ದುಗೊಳಿಸಲಾಗುವುದು. ಜೊತೆಗೆ ದಂಡವನ್ನೂ ಪಾವತಿಸಬೇಕಾಗುತ್ತದೆ’ ಎಂದು ಹೇಳಿದರು.
ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅನಾಹುತಗಳ ಬಗ್ಗೆ ಶಾಲೆಗಳ ವಿದ್ಯಾರ್ಥಿಗಳು ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.