ADVERTISEMENT

ತರಬೇತಿ ವೇಳೆಯೇ ಜನಸ್ನೇಹಿ ಪೊಲೀಸರಾಗಿ ತಯಾರು: ಡಾ.ಜಿ. ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 6:01 IST
Last Updated 19 ನವೆಂಬರ್ 2018, 6:01 IST
   

ಬೆಂಗಳೂರು:ಯಾವುದೇ ಭಯವಿಲ್ಲದೇ ಜನರು ಪೊಲೀಸ್‌ ಠಾಣೆಯಲ್ಲಿ ಸೇವೆ ಪಡೆಯುವ ಜನಸ್ನೇಹಿ ಪೊಲೀಸರನ್ನು ನೀಡಲು ತರಬೇತಿ ಸಂದರ್ಭದಲ್ಲೇ ಕೊಂಚ ಬದಲಾವಣೆ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ತಿಲಕ್ ನಗರ ಪೊಲೀಸ್ ಠಾಣೆ ಹಾಗೂ ಸಹಾಯಕ ಪೊಲೀಸ್‌ ಆಯುಕ್ತರ ಕಚೇರಿ ನವೀಕರಣ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಹಗಲು ರಾತ್ರಿ ಎನ್ನದೇ ಶ್ರಮಿಸುವ ಪೊಲೀಸರನ್ನು ಸಮಾಜದಲ್ಲಿ ಬಿಂಬಿಸುವ ರೀತಿ ಸರಿ ಇಲ್ಲ. ಅವರ ಮೇಲಿನ‌ಭಯ ಜನಸಾಮಾನ್ಯರಲ್ಲಿ ಹೋಗಬೇಕು. ಪೊಲೀಸರು ಕೂಡ ಹೆಚ್ಚು ಜನಸ್ನೇಹಿ ಸೇವೆ ನೀಡಬೇಕು.‌ಅದಕ್ಕಾಗಿ ತರಬೇತಿ ನೀಡುವ ಸಂದರ್ಭದಲ್ಲಿಯೇ ಸ್ನೇಹಪೂರ್ವಕ ನಡವಳಿಕೆ ಬಗ್ಗೆಯೂ ತರಬೇತಿ ನೀಡಲಾಗುವುದು ಎಂದರು.

ADVERTISEMENT

₹1 ಕೋಟಿವೆಚ್ಚದಲ್ಲಿ ನಿರ್ಮಿಸಿರುವ ತಿಲಕ್ ನಗರ ಪೊಲೀಸ್‌ ಠಾಣೆ ನವೀಕರಣ ಮಾಡಿರುವ ಇನ್‌ಫೋಸಿಸ್‌ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಸೈಬರ್‌ ಕ್ರೈಂ ತರಬೇತಿ ಕಟ್ಟಡವನ್ನು ₹22 ಕೋಟಿ ವೆಚ್ಚದಲ್ಲಿ ಇನ್‌ಫೋಸಿಸ್‌ ಅವರು ನಿರ್ಮಿಸಿಕೊಡುತ್ತಿರುವುದು ಅಭಿನಂದನಾರ್ಹ. ಕರ್ನಾಟಕ ಪೊಲೀಸ್‌ ಅನ್ನು ಆಧುನೀಕರಣ ಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಕೇಂದ್ರ ಸರಕಾರದ ನೆರವಿನೊಂದಿಗೆ ಸಿಸಿ ಕ್ಯಾಮರಾ ಅಳವಡಿಕೆ, ಟ್ರಾಫಿಕ್‌ ನಿಯಮ ಪಾಲನೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಪೊಲೀಸ್‌ ಸಿಬ್ಬಂದಿಯ ವೇತನ ತಾರತಮ್ಯ ಸರಿದೂಗಿಸಲು ಔರಾದ್ಕರ್‌ ಅವರ ವರದಿಯನ್ನು ಶೀಘ್ರವೇ ಜಾರಿ ಮಾಡಲು ಸರಕಾರ ಮುಂದಾಗಿದೆ ಎಂದು ಇದೇ ವೇಳೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಇನ್‌ಫೋಸಿಸ್‌ ಮುಖ್ಯಸ್ಥೆ ಸುಧಾಮೂರ್ತಿ, ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌, ಶಾಸಕಿ ಸೌಮ್ಯ, ಮೇಯರ್ ಗಂಗಾಂಬಿಕೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.