ADVERTISEMENT

ಗುಂಡು ಹಾರಿಸಿ, ವಾಪಸು ಬಂದು ಮಚ್ಚಿನಿಂದ ಕೊಲೆ

ಬಾರ್ ಮಾಲೀಕನ ಹತ್ಯೆ: ಹಳೇ ವೈಷಮ್ಯದ ಶಂಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 20:44 IST
Last Updated 16 ಅಕ್ಟೋಬರ್ 2020, 20:44 IST

ಬೆಂಗಳೂರು: ಬ್ರಿಗೇಡ್ ರಸ್ತೆಗೆ ಹೊಂದಿಕೊಂಡಿರುವ ಆರ್‌ಎಚ್‌ಪಿ ರಸ್ತೆಯಲ್ಲಿರುವ ‘ಡ್ಯುಯೆಟ್’ ಬಾರ್ ಮಾಲೀಕ ಮನೀಶ್ ಶೆಟ್ಟಿಯನ್ನು (41) ಹತ್ಯೆ ಮಾಡಿದ ಆರೋಪಿಗಳ ಪತ್ತೆಗೆ ಎಂಟು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪ್ರಕರಣದ ತನಿಖೆ ಚುರುಕುಗೊಂಡಿದೆ.

‘ಚಿಕ್ಕಮಗಳೂರಿನ ಕೊಪ್ಪದ ಮನೀಶ್ ಶೆಟ್ಟಿ, ಈ ಹಿಂದೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಭೂಗತ ಪಾತಕಿಗಳಾದ ಬನ್ನಂಜೆ ರಾಜ ಹಾಗೂ ರವಿ ಪೂಜಾರಿ ಗ್ಯಾಂಗ್‌ನಲ್ಲೂ ಗುರುತಿಸಿಕೊಂಡಿದ್ದ. ಕೆಲ ವರ್ಷಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ಬಾರ್‌ ನಡೆಸುತ್ತಿದ್ದ. ಹಳೇ ವೈಷಮ್ಯದಿಂದಾಗಿ ಎದುರಾಳಿಗಳು ಅವರನ್ನು ಹತ್ಯೆ ಮಾಡಿರುವ ಸಾಧ್ಯತೆ ಇದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಮುಂಬೈ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಮನೀಶ್ ಶೆಟ್ಟಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಅವರ ಹತ್ಯೆ ಆರೋಪಿಗಳ ಪತ್ತೆಗಾಗಿ ಪೊಲೀಸ್ ವಿಶೇಷ ತಂಡಗಳು, ಹೊರ ರಾಜ್ಯಕ್ಕೆ ಹೋಗಿವೆ’ ಎಂದೂ ಹೇಳಿದರು.

ADVERTISEMENT

ಕೆಲಸಗಾರರ ಎದುರೇ ಹತ್ಯೆ: ಮನೀಶ್ ಶೆಟ್ಟಿ ಹತ್ಯೆ ಸಂಬಂಧ ಬಾರ್ ಕೆಲಸಗಾರರೊಬ್ಬರು ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ. ‘ದುಷ್ಕರ್ಮಿಗಳ ತಂಡ ಕೆಲಸಗಾರರ ಎದುರೇ ಮನೀಶ್ ಶೆಟ್ಟಿ ಅವರನ್ನು ಹತ್ಯೆ ಮಾಡಿತು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಮನೀಶ್ ಶೆಟ್ಟಿ ಅವರು ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಕಾರಿನಲ್ಲಿ ಬ್ರಿಗೇಡ್ ರಸ್ತೆಗೆ ಬಂದಿದ್ದರು. ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿ ನಡೆದುಕೊಂಡು ಬಾರ್‌ನತ್ತ ಬರುತ್ತಿದ್ದರು. ನಾನೂ ಜೊತೆಗಿದ್ದೆ. ಅದೇ ಸಂದರ್ಭ ಹಿಂದಿ
ನಿಂದ ಬಂದ ವ್ಯಕ್ತಿಯೊಬ್ಬ ಬಂದೂಕಿ
ನಿಂದ ಮನೀಶ್ ಮೇಲೆ ಗುಂಡು ಹಾರಿಸಿದ. ಸ್ಥಳದಲ್ಲೇ ಮನೀಶ್ ಕುಸಿದು ಬಿದ್ದರು. ನಾನು ಗುಂಡು ಹಾರಿಸಿದ ವ್ಯಕ್ತಿಯನ್ನು ಹಿಡಿಯಲು ಹೋಗಿದ್ದೆ. ಆತ ನನಗೆ ಬಂದೂಕು ತೋರಿಸಿ ಹೆದರಿಸಿ ಪರಾರಿಯಾದ’ ಎಂದೂ ಕೆಲಸಗಾರ ದೂರಿನಲ್ಲಿ ತಿಳಿಸಿದ್ದಾರೆ.

‘ರಸ್ತೆಯಲ್ಲಿ ಮನೀಶ್ ನರಳುತ್ತಿ
ದ್ದರು. ಆ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ದುಷ್ಕರ್ಮಿಯೊಬ್ಬ, ಮಚ್ಚಿನಿಂದ ಮನೀಶ್ ಅವರನ್ನು ಕೊಚ್ಚಿದ್ದ. ದೇಹದ
ಲ್ಲೆಲ್ಲ ರಕ್ತ ಸೋರುತ್ತಿತ್ತು. ನಂತರ ಆ ದುಷ್ಕರ್ಮಿ, ಮತ್ತೊಬ್ಬ ದುಷ್ಕರ್ಮಿ ಜೊತೆ ದ್ವಿಚಕ್ರ ವಾಹನದಲ್ಲಿ ಪರಾರಿಯಾದ. ನಂತರ ಮನೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇಅವರು ಮೃತಪಟ್ಟಿದ್ದಾರೆ. ಮನೀಶ್ ಅವರನ್ನು ಹಿಂಬಾಲಿಸಿ ಬಂದು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ’ ಎಂದೂ ದೂರಿನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.