ಬೆಂಗಳೂರು: ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ರೈತರು ಕಾರ್ಮಿಕರು ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ಬಂಡಾಯ ಸಾಹಿತ್ಯ ಸಂಘಟನೆ ಬೆಂಬಲ ಸೂಚಿಸಿದೆ.
ಜಿ. ರಾಮಕೃಷ್ಣ, ಬರಗೂರು ರಾಮಚಂದ್ರಪ್ಪ, ಬಸವರಾಜ ಸಬರದ, ಆರ್.ಜಿ. ಹಳ್ಳಿ ನಾಗರಾಜ್, ಟಿ.ಆರ್. ಚಂದ್ರಶೇಖರ, ಭಕ್ತರಹಳ್ಳಿ ಕಾಮರಾಜ್, ಸಿದ್ಧನಗೌಡ ಪಾಟೀಲ, ಸುಕನ್ಯಾ ಮಾರುತಿ, ಕೆ. ಶರೀಫಾ, ಬಿ. ರಾಜಶೇಖರಮೂರ್ತಿ ಹಾಗೂ ಎಸ್.ವೈ. ಗುರುಶಾಂತ್ ಅವರು ಪ್ರತಿಭಟನೆಗೆ ಸಹಮತ ಸೂಚಿಸಿದ್ದಾರೆ.
‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚೆಗೆ ಜಾರಿಗೆ ತರಲು ಮುಂದಾಗಿರುವ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಕರ್ನಾಟಕ, ಪಂಜಾಬ್, ಹರಿಯಾಣ ಸೇರಿದಂತೆ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಸಂಬಂಧಪಟ್ಟ ಭಾಗಿದಾರ ಪ್ರತಿನಿಧಿಗಳ ಜತೆಗೆ ಚರ್ಚಿಸದೆ ಏಕಪಕ್ಷೀಯವಾಗಿ ಸುಗ್ರೀವಾಜ್ಞೆ ಹೊರಡಿಸಿ, ಈಗ ಆತುರದಲ್ಲಿ ಸಂಸದೀಯ ಮುದ್ರೆ ಒತ್ತುವ ಕ್ರಮವು ಪ್ರಜಾಪ್ರಭುತ್ವಕ್ಕೆ ತಕ್ಕ ನಡೆಯಾಗಿಲ್ಲ. ಹಾಗಾಗಿ ರೈತರ ಹಾಗೂ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಲಾಗುತ್ತಿದೆ’ ಎಂದು ಸಂಘಟನೆ ತಿಳಿಸಿದೆ.
‘ಕಾಯ್ದೆಗಳು ರೈತ ಮತ್ತು ಕಾರ್ಮಿಕರ ಪರವಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿಪಾದಿಸುತ್ತಿವೆ. ಆದರೆ. ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳು ಪಕ್ಷಾತೀತವಾಗಿ ಪ್ರತಿರೋಧ ಒಡ್ಡುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರತಿಭಟನಾಕಾರರ ಜತೆಗೆ ಮಾತುಕತೆಗೆ ಮುಂದಾಗಬೇಕಿರುವುದು ಪ್ರಜಾಸತ್ತಾತ್ಮಕ ಸರ್ಕಾರಗಳ ನೈತಿಕ ಜವಾಬ್ದಾರಿ’ ಎಂದು ಸಂಘಟನೆ ಪ್ರಕಟಣೆಯಲ್ಲಿ ಪ್ರತಿಪಾದಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.