
ಬೆಂಗಳೂರು: ವಿದ್ಯಾರ್ಥಿಗಳಲ್ಲಿನ ಜ್ಞಾನದ ಮಟ್ಟವನ್ನು ಪರೀಕ್ಷಿಸಲು ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್ಶಿಪ್’ ಮತ್ತೆ ಬಂದಿದ್ದು, ಈ ಸ್ಪರ್ಧೆಯ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರಗತಿದಾಯಕ ಕಲಿಕೆಯ ಅಗತ್ಯವಿದ್ದು, ಆರೋಗ್ಯಕರ ಸ್ಪರ್ಧೆಗಳು ಯುವ ಪ್ರತಿಭೆಗಳ ಜ್ಞಾನಭಂಡಾರವನ್ನು ಮತ್ತಷ್ಟು ವೃದ್ಧಿಸುತ್ತವೆ. ಈ ಉದ್ದೇಶದಿಂದ ‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸುತ್ತಿದೆ.
‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್ಶಿಪ್’ನಲ್ಲಿ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಸ್ಪರ್ಧೆಯು ಆರು ವಲಯಗಳಲ್ಲಿ ಮೊದಲ ಹಂತದಲ್ಲಿ ನಡೆಯಲಿದೆ. ಮೈಸೂರು, ಹುಬ್ಬಳ್ಳಿ, ಬಾಗಲಕೋಟೆ, ಬೀದರ್, ದಾವಣಗೆರೆ ಮತ್ತು ಬೆಂಗಳೂರು ವಲಯಗಳಲ್ಲಿ ಗೆಲುವು ಸಾಧಿಸಿದವರು ರಾಜ್ಯಮಟ್ಟದಲ್ಲಿ ಸ್ಪರ್ಧೆಗೆ ಪಾಲ್ಗೊಳ್ಳುವ ಅರ್ಹತೆ ಪಡೆಯಲಿದ್ದಾರೆ.
ವಲಯಗಳಲ್ಲಿ ವಿಜೇತರಾದ ಎಲ್ಲರಿಗೂ ಒಂದು ದಿನದ ಆವಿಷ್ಕಾರ ಕಾರ್ಯಾಗಾರವನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಾಗಾರದಲ್ಲಿ ಸಮೃದ್ಧ ಕಲಿಕೆಯ ಅನುಭವ ಪಡೆಯಬಹುದು. ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಹೊರಹೊಮ್ಮಲು ಈ ಆವಿಷ್ಕಾರ ಕಾರ್ಯಾಗಾರವು ಹೊಸ ವೇದಿಕೆಯನ್ನು ಕಲ್ಪಿಸಲಿದೆ.
ಪ್ರಕ್ರಿಯೆ ಹೇಗೆ?: ಇದು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆಯಾಗಿದ್ದು, ವಿದ್ಯಾರ್ಥಿಗಳು ಶಾಲೆಗಳ ಮೂಲಕ ತಂಡವಾಗಿ ನೋಂದಾಯಿಸಿಕೊಳ್ಳಬೇಕು. ಪ್ರತಿ ತಂಡದಲ್ಲಿ ಕಡ್ಡಾಯವಾಗಿ ಇಬ್ಬರು ವಿದ್ಯಾರ್ಥಿಗಳು ಇರಬೇಕು. ಬೇರೆ ಬೇರೆ ತರಗತಿಯ ವಿದ್ಯಾರ್ಥಿಗಳೂ ತಂಡವಾಗಿ ಭಾಗವಹಿಸಬಹುದು.
ನೋಂದಾಯಿತ ತಂಡಗಳಿಗೆ ಪ್ರಾಥಮಿಕ ಹಂತದ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ವಲಯದಲ್ಲಿ 6 ಅಗ್ರ ತಂಡಗಳು ವಲಯ ಮಟ್ಟದ ಅಂತಿಮ ಹಂತಕ್ಕೆ ತಲುಪುತ್ತವೆ. ಆರು ವಲಯಗಳ ವಿಜೇತರು ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯುತ್ತಾರೆ. ಅಂತಿಮ ಹಂತದ ಎಲ್ಲ ಸ್ಪರ್ಧಿಗಳಿಗೆ ಆವಿಷ್ಕಾರ ಕಾರ್ಯಾಗಾರ ನಡೆಸಲಾಗುತ್ತದೆ. ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದೆ.
ನೋಂದಣಿ ಉಚಿತವಾಗಿದ್ದು, ಆಸಕ್ತರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್ಶಿಪ್’ಗೆ ನೋಂದಾಯಿಸಿಕೊಳ್ಳಬಹುದು.
ಸಂಪರ್ಕಕ್ಕೆ: 7338018541 (ಕಚೇರಿ ಅವಧಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಲಭ್ಯ)