ಕೆಂಗೇರಿ: ಬಾಹ್ಯಾಕಾಶ ವಿಜ್ಞಾನದ ಮಾಹಿತಿಗಳನ್ನು ಸಮರ್ಪಕವಾಗಿ ಬಳಸಿಕೊಂಡು ಯುವ ಸಮೂಹ ದೇಶದ ಅಭಿವೃದ್ಧಿಗೆ ಕಾಣಿಕೆ ನೀಡಬೇಕು ಎಂದು ಇಸ್ರೊ ಮಾಜಿ ಅಧ್ಯಕ್ಷ ಡಾ. ಎಸ್. ರಂಗರಾಜನ್ ಹೇಳಿದರು.
ಬಿಜಿಎಸ್ ಬಿ ಸ್ಕೂಲಿನ ಪ್ರಥಮ ಬಿಎಸ್ಸಿ, ಬಿಕಾಂ, ಬಿಸಿಎ ಹಾಗೂ ಬಿಬಿಎ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಾಹ್ಯಾಕಾಶ ವಿಜ್ಞಾನದ ವ್ಯಾಪ್ತಿ ವಿಸ್ತಾರವಾಗಿದೆ. ಉದ್ಯೋಗ ಸೃಜನೆ ಹಾಗೂ ಅಭಿವೃದ್ಧಿಗೆ ಪ್ರೇರಕ ಶಕ್ತಿಯಂತಿರುವ ಬಾಹ್ಯಕಾಶ ವಿಜ್ಞಾನ ಅವಕಾಶಗಳ ಆಗರವಾಗಿದೆ ಎಂದರು.
ಬಿಜಿಎಸ್ ಮತ್ತು ಎಸ್ಜೆಬಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶನಾಥ ಸ್ವಾಮೀಜಿ ಮಾತನಾಡಿ, ‘ಬುದ್ಧ, ಬಸವಣ್ಣನ ಸಂದೇಶಗಳು ಸಮಾಜಕ್ಕೆ ಅಪಥ್ಯವಾಗಿವೆ. ಹೀಗಾಗಿಯೇ ಯುವ ಸಮುದಾಯದಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ’ ಎಂದು ಬೇಸರ ವ್ಯಕ್ತ ಪಡಿಸಿದರು.
ಗೆಲುವು ಶ್ರಮಿಕನ ಸ್ವತ್ತು. ಪ್ರತಿಯೊಂದು ಸಾಧನೆಯ ಹಿಂದೆ ಅಪಾರ ಪರಿಶ್ರಮವಿರುತ್ತದೆ. ಕಾಲಹರಣ ಮಾಡಿದರೆ ಭವಿಷ್ಯದ ಜೀವನ ದುಸ್ತರವಾಗಲಿದೆ ಎಂದು ಎಚ್ಚರಿಸಿದರು.
ಕಾಗ್ನಿಝಂಟ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕಿ ಸುದರ್ಶನಿ ಪುಟ್ಟಪ್ಪ ಮಾತನಾಡಿ, ವಿದ್ಯಾರ್ಥಿಗಳು ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಬಲ ವೃದ್ಧಿಸಿಕೊಳ್ಳಬೇಕು. ನಿರಂತರ ಪ್ರಯತ್ನಕ್ಕೆ ಫಲ ನಿಶ್ಚಿತ ಎಂದರು.
ನಟಿ ಅನನ್ಯ ಅಮರ್, ಬಿಜಿಎಸ್ ಅಕಾಡೆಮಿಕ್ ಡೈರೆಕ್ಟರ್ ಡಾ. ಪುಟ್ಟರಾಜು, ಬಿಜಿಎಸ್ ಬಿ ಶಾಲೆಯ ಪ್ರಾಂಶುಪಾಲೆ ಮಮತಾ. ಜೆ. ರೂಪಿಕಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.