ಬೆಂಗಳೂರು: ಲೇವಾದೇವಿಗಾರರು, ಖಾಸಗಿ ಹಣಕಾಸು ಸಂಸ್ಥೆಗಳು, ಗಿರವಿ ಅಂಗಡಿಗಳಲ್ಲಿ ರೈತರು, ಭೂರಹಿತ ಕೃಷಿ ಕಾರ್ಮಿಕರು ಹಾಗೂ ದುರ್ಬಲ ವರ್ಗದವರ ಸಾಲವನ್ನು ಏಕಗಂಟಿನಲ್ಲಿ ‘ಚುಕ್ತಾ’ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ತಂದಿರುವ ‘ಋಣ ಪರಿಹಾರ ಸುಗ್ರೀವಾಜ್ಞೆ’ಗೆ ಕೆಲವು ತಿದ್ದುಪಡಿಗಳನ್ನು ಮಾಡುವಂತೆ ಸೂಚಿಸಿರುವ ಕೇಂದ್ರ ಸರ್ಕಾರ ವಾಪಾಸು ಕಳುಹಿಸಿದೆ.
ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯಲ್ಲಿಸಿವಿಲ್ ಕೋರ್ಟ್ ಅನ್ನು ಹೊರಗಿಟ್ಟಿರುವುದರಿಂದ, ಮೇಲ್ಮನವಿ ಸಲ್ಲಿಸಲು ಒಂದು ಅವಕಾಶ ಕಲ್ಪಿಸಬೇಕು. ಉಪ ವಿಭಾಗಾಧಿಕಾರಿಗಳ ಆದೇಶದ ವಿರುದ್ಧ ಜಿಲ್ಲಾಧಿಕಾರಿಗಳನ್ನು ಮೇಲ್ಮನವಿ ಪ್ರಾಧಿಕಾರವನ್ನಾಗಿ ನೇಮಿಸುವಂತೆ ಕೇಂದ್ರ ಸಲಹೆ ನೀಡಿದೆ.
ಲೇವಾದೇವಿಗಾರರು, ಖಾಸಗಿ ಹಣಕಾಸು ಸಂಸ್ಥೆಗಳು ಒಂದು ವರ್ಷದೊಳಗೆ ಮೇಲ್ಮನವಿ ಸಲ್ಲಿಸಬೇಕು. ಈ ಹಿಂದಿನ ಎಲ್ಲ ಮಸೂದೆಗಳನ್ನು ಅಸಿಂಧುಗೊಳಿಸಲು ಸುಗ್ರೀವಾಜ್ಞೆ ಅವಕಾಶ ಕಲ್ಪಿಸಿಕೊಳ್ಳಲಾಗಿತ್ತು. ಆದರೆ, ಕೇಂದ್ರದ ಸಲಹೆಯ ಮೇರೆಗೆ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ–2018 ಹಾಗೂ ಲೇವಾದೇವಿ ತಡೆ ಕಾಯ್ದೆ– 2002ರ ನಿಯಮಗಳಿಗೆ ಒಳಪಟ್ಟು ಇತರ ನಿಯಮಗಳನ್ನು ಅಸಿಂಧು ಮಾಡುವ ಅವಕಾಶ ಇಟ್ಟುಕೊಳ್ಳಬಹುದು ಎಂದೂ ಸಲಹೆ ನೀಡಿದೆ.
ನಿಯಮ ಬದಲಿಸಿ ಕೇಂದ್ರಕ್ಕೆ ಮರು ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಂಡಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.