ADVERTISEMENT

ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿ ಪ್ರದಾನ | ಆತ್ಮಸಾಕ್ಷಿಯಂತೆ ಕೆಲಸ ಮಾಡಿ: ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 20:44 IST
Last Updated 31 ಡಿಸೆಂಬರ್ 2025, 20:44 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ‘ಪತ್ರಕರ್ತರು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದರೆ ಯಾರಿಗೂ ಹೆದರಬೇಕಾಗಿಲ್ಲ’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

‘ಪ್ರೆಸ್‌ಕ್ಲಬ್‌ ಆಫ್‌ ಬೆಂಗಳೂರು’ ಹೊಸ ವರ್ಷಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ 2025ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪತ್ರಿಕಾ ಕ್ಷೇತ್ರಕ್ಕೆ ಈಗಲೂ ತನ್ನದೇ ಆದ ಮಹತ್ವವಿದೆ. ಸಮಾಜದಲ್ಲಿ ಏನಾದರೂ ಪರಿವರ್ತನೆ ಆಗಬೇಕು ಎಂದರೆ ಅದು ಮಾಧ್ಯಮದಿಂದ ಎನ್ನುವ ನಂಬಿಕೆ ಉಳಿದುಕೊಂಡಿದೆ. ಅಂತಹ ವಿಶ್ವಾಸವನ್ನು ಉಳಿಸಿಕೊಂಡು ಬದಲಾವಣೆಗೆ ಮಾಧ್ಯಮ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಹಿಂದೆ ವಿಧಾನ ಪರಿಷತ್‌ ಅಧಿವೇಶನಕ್ಕೆ ಟಿವಿ ಮಾಧ್ಯಮದವರ ಪ್ರವೇಶ ನಿರಾಕರಿಸಿದಾಗ ಗೊಂದಲ ಆಯಿತು. ಆಗ ನಾನೇ ಎಲ್ಲರಿಗೂ ಅಧಿವೇಶನದ ದೃಶ್ಯಾವಳಿ ಸಿಗುವ ಹಾಗೆ ವ್ಯವಸ್ಥೆ ಮಾಡಿದೆ. ಇದರಿಂದ ನಾಡಿನ ಜನರು ಕಲಾಪವನ್ನು ಮಾಧ್ಯಮಗಳ ಮೂಲಕ ನೋಡಲು ಅವಕಾಶವಾಗಿದೆ’ ಎಂದು ಹೇಳಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ‘25 ವರ್ಷಗಳಿಂದ ಪ್ರೆಸ್‌ಕ್ಲಬ್‌ ಆಫ್‌ ಬೆಂಗಳೂರಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ಪತ್ರಕರ್ತರ ಹಿತರಕ್ಷಣೆಗೆ ಹಲವಾರು ಸುಧಾರಣಾ ಕ್ರಮಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದಿಂದ ಕೈಗೊಳ್ಳಲಾಗಿದೆ. ಹೊಸಕೆರೆ ಹಳ್ಳಿಯಲ್ಲಿ ನೀಡಿರುವ ಒಂದು ಎಕರೆ ಜಾಗದಲ್ಲಿ ಪ್ರೆಸ್‌ಕ್ಲಬ್‌ನ ವಿಶಾಲ ಕಟ್ಟಡ ನಿರ್ಮಿಸಲಾಗುವುದು’ ಎಂದು ಹೇಳಿದರು.

ಶಾಸಕ ಕೆ.ಷಡಕ್ಷರಿ, ಜವಾಹರ್‌ ಬಾಲಭವನ ಸೊಸೈಟಿಯ ಅಧ್ಯಕ್ಷ ಬಿ.ಆರ್.ನಾಯ್ಡು, ಸಚಿವರ ಮಾಧ್ಯಮ ಸಮನ್ವಯಾಧಿಕಾರಿಗಳಾದ ಬಿ.ಎನ್‌.ಶ್ರೀಧರ, ಲಕ್ಷ್ಮೀನಾರಾಯಣ, ಪ್ರೆಸ್‌ ಕ್ಲಬ್‌ ಅಧ್ಯಕ್ಷ ಆರ್‌.ಶ್ರೀಧರ್‌, ಪ್ರಧಾನ ಕಾರ್ಯದರ್ಶಿ ಎಂ.ಡಿ.ಶಿವಕುಮಾರ್‌ ಬೆಳ್ಳಿತಟ್ಟೆ, ಕಾರ್ಯದರ್ಶಿ ಮಂಜುನಾಥ್‌, ಜಂಟಿ ಕಾರ್ಯದರ್ಶಿ ಧರಣೇಶ್ ಬೂಕನಕೆರೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಪ್ರಜಾವಾಣಿಯ ಕೆ.ಜೆ.ಮರಿಯಪ್ಪ, ಆರ್‌.ಮಂಜುನಾಥ್‌,  ಬಿ.ವಿ.ಶ್ರೀನಾಥ, ಮಂಜುಶ್ರೀ ಕಡಕೋಳ, ಡೆಕ್ಕನ್ ಹೆರಾಲ್ಡ್‌ನ ಮಧುಕೇಶ್ವರ ಜವಳಿ ಸೇರಿದಂತೆ 53 ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆ.ವಿ.ಪ್ರಭಾಕರ್‌, ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಪರವಾಗಿ ಅವರ ತಾಯಿ ಪಾರ್ವತಿ ಶಾಮರಾವ್‌ ವಿಶೇಷ ಪ್ರಶಸ್ತಿ ಸ್ವೀಕರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.