ADVERTISEMENT

ಬಿಎಂಟಿಸಿ ಖಾಸಗೀಕರಣಕ್ಕೆ ಹುನ್ನಾರ: ಎಎಪಿ ಆರೋಪ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 19:03 IST
Last Updated 29 ಮಾರ್ಚ್ 2021, 19:03 IST

ಬೆಂಗಳೂರು:‘ಸಾರಿಗೆ ನೌಕರರ ಮುಷ್ಕರದ ನೆಪವೊಡ್ಡಿ, ಸರ್ಕಾರ ಬಿಎಂಟಿಸಿಯ ಖಾಸಗೀಕರಣಕ್ಕೆ ಹುನ್ನಾರ ನಡೆಸಿದೆ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ)ಬೆಂಗಳೂರು ನಗರ ಘಟಕದ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಆರೋಪಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸಾರಿಗೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಏ.7ರಂದು ಮುಷ್ಕರಕ್ಕೆ ಮುಂದಾಗಿದ್ದಾರೆ. ಇದರಿಂದ ಪ್ರಯಾಣಿಕರ ಸಮಸ್ಯೆ ನೀಗಿಸುವ ನೆಪವೊಡ್ಡಿ, ಬಿಎಂಟಿಸಿಯ ಲಾಭದಾಯಕ ಮಾರ್ಗಗಳನ್ನು ಖಾಸಗಿಯವರಿಗೆ ವಹಿಸಲು, ರಹದಾರಿ ಅರ್ಜಿಗಳನ್ನು ಕರೆದಿದೆ. ಇದು, ಅಪಾಯಕಾರಿ ಬೆಳವಣಿಗೆ’ ಎಂದರು.

‘ಸಾರಿಗೆ ಕಾರ್ಮಿಕ ಸಂಘಟನೆಗಳು ಪೂರ್ವನಿಯೋಜಿತವಾಗಿಯೇ ಮುಷ್ಕರ ಮಾಡಲಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸದೆ, ಈ ರೀತಿ ಖಾಸಗೀಕರಣಕ್ಕೆ ಮುಂದಾಗಿರುವುದು ಸರಿಯಲ್ಲ’ ಎಂದು ದೂರಿದರು.

ADVERTISEMENT

ಎಎಪಿ ವಕ್ತಾರ ಶರತ್ ಖಾದ್ರಿ,‘ಥಾಣೆ, ಮುಂಬೈಗಳಲ್ಲಿ ಸಾರಿಗೆ ನಿರ್ವಹಣೆಯ ಜವಾಬ್ದಾರಿಯನ್ನು ಸ್ಥಳೀಯಾಡಳಿತ ಸಂಸ್ಥೆಗಳು ವಹಿಸಿಕೊಂಡಿವೆ. ಅಂತೆಯೇ ಬೆಂಗಳೂರಿನ ಸಾರಿಗೆ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸುವುದು ಸೂಕ್ತ ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಯೂ ಬಿಎಂಟಿಸಿ ಖಾಸಗೀಕರಣಕ್ಕೆ ಪುಷ್ಟಿ ನೀಡುವಂತಿದೆ’ ಎಂದು ಅಭಿಪ್ರಾಯಪಟ್ಟರು.

‘ಲಕ್ಷಾಂತರ ಸಾರಿಗೆ ಕಾರ್ಮಿಕರು ಹಾಗೂ ಅವರ ಕುಟುಂಬದವರನ್ನು ಬೀದಿಗೆ ತಳ್ಳುವ ಅಮಾನವೀಯ ನಿಲುವನ್ನು ಸರ್ಕಾರ ಪ್ರದರ್ಶಿಸುತ್ತಿದೆ. ಇದೇ ಸ್ಥಿತಿ ಮುಂದುವರಿದರೆ, ಹೋರಾಟ ಅನಿವಾರ್ಯ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.