ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದಆದಿತ್ಯ ಆಳ್ವ ತಲೆಮರೆಸಿಕೊಳ್ಳಲು ಸಹಕರಿಸಿದ್ದ ಅನುಮಾನದ ಮೇರೆಗೆ, ಆತನ ಸಹೋದರಿ ಪ್ರಿಯಾಂಕಾ ಆಳ್ವ ಅವರಿಗೆ ಸಿಸಿಬಿ ಪೊಲೀಸರು ಎರಡನೇ ಬಾರಿ ನೋಟಿಸ್ ನೀಡಿದ್ದಾರೆ.
ಪ್ರಕರಣ ದಾಖಲಾದಾಗಿನಿಂದಲೂ ತಲೆಮರೆಸಿಕೊಂಡಿರುವ ಆದಿತ್ಯ ಪೊಲೀಸರ ಕೈಗೆ ಸಿಗುತ್ತಿಲ್ಲ. ಆತ, ಮುಂಬೈನಲ್ಲಿದ್ದ ಸಹೋದರಿ ಪ್ರಿಯಾಂಕಾ ಹಾಗೂ ಅವರ ಪತಿ ವಿವೇಕ್ ಒಬೆರಾಯ್ ಮನೆಯಲ್ಲಿದ್ದ ಮಾಹಿತಿ ಇತ್ತೀಚೆಗೆ ಸಿಸಿಬಿಗೆ ಸಿಕ್ಕಿತ್ತು. ಹೀಗಾಗಿ, ಒಬೆರಾಯ್ ಮನೆಯಲ್ಲಿ ಸಿಸಿಬಿ ಪೊಲೀಸರು ಶೋಧ ನಡೆಸಿದ್ದರು.
ಶುಕ್ರವಾರವೇ (ಅ.16) ವಿಚಾರಣೆಗೆ ಹಾಜರಾಗುವಂತೆ ಪೊಲೀಸರು, ಪ್ರಿಯಾಂಕಾ ಅವರಿಗೆ ನೋಟಿಸ್ ನೀಡಿದ್ದರು. ಆದರೆ, ಅವರು ವಿಚಾರಣೆಗೆ ಬಂದಿರಲಿಲ್ಲ. ಇದೀಗ ಎರಡನೇ ಬಾರಿ ಅವರಿಗೆ ನೋಟಿಸ್ ನೀಡಲಾಗಿದ್ದು, ‘ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಅ.20ರಂದು ವಿಚಾರಣೆಗೆ ಹಾಜರಾಗಬೇಕು’ ಎಂದು ಸೂಚಿಸಲಾಗಿದೆ.
‘ಮೊದಲ ಬಾರಿ ನೋಟಿಸ್ ನೀಡಿದಾಗ ಪ್ರಿಯಾಂಕಾ ವಿಚಾರಣೆಗೆ ಬಂದಿಲ್ಲ. ಇದೀಗ ಎರಡನೇ ಬಾರಿ ನೋಟಿಸ್ ನೀಡಲಾಗಿದೆ. ಅವರು ಎರಡನೇ ಬಾರಿಯೂ ಗೈರಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.