ADVERTISEMENT

ಭಾಗ್ಯಗಳನ್ನು ಕೊಟ್ಟು ಭಿಕ್ಷುಕರನ್ನಾಗಿಸಬೇಡಿ: ಬಿ.ಎಂ. ಕುಮಾರಸ್ವಾಮಿ

ಸ್ವದೇಶಿ ಜಾಗರಣ ಮಂಚ್‌ನ ರಾಷ್ಟ್ರೀಯ ಪರಿಷತ್‌ ಸದಸ್ಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 19:51 IST
Last Updated 9 ಜನವರಿ 2020, 19:51 IST
ಸ್ವದೇಶಿ ಮೇಳ ಉದ್ಘಾಟಿಸಿದ ಯಡಿಯೂರಪ್ಪ ಮಳಿಗೆಯೊಂದರಲ್ಲಿ ತಿನಿಸು ಸವಿದರು. ಸಿದ್ದಗಂಗಾ ಕ್ಷೇತ್ರದ ಸಿದ್ದಲಿಂಗ ಸ್ವಾಮೀಜಿ ಇದ್ದರು -–ಪ್ರಜಾವಾಣಿ ಚಿತ್ರ
ಸ್ವದೇಶಿ ಮೇಳ ಉದ್ಘಾಟಿಸಿದ ಯಡಿಯೂರಪ್ಪ ಮಳಿಗೆಯೊಂದರಲ್ಲಿ ತಿನಿಸು ಸವಿದರು. ಸಿದ್ದಗಂಗಾ ಕ್ಷೇತ್ರದ ಸಿದ್ದಲಿಂಗ ಸ್ವಾಮೀಜಿ ಇದ್ದರು -–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದಲ್ಲಿ 5.70 ಕೋಟಿ ಸಣ್ಣ ಉದ್ಯಮಗಳಿವೆ. ಈ ಉದ್ಯಮಗಳನ್ನು ನಡೆಸುತ್ತಿರುವವರಲ್ಲಿ ಶೇ 60ರಷ್ಟು ಮಂದಿ ಪ‍ರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದವರು. ಅನ್ನಭಾಗ್ಯ, ಆ ಭಾಗ್ಯ–ಈ ಭಾಗ್ಯ ಎಂದು ಉಚಿತವಾಗಿ ಅದು ಇದು ಕೊಟ್ಟು ಅವರನ್ನು ಭಿಕ್ಷುಕರನ್ನಾಗಿ ಮಾಡುವುದಕ್ಕಿಂತ ಈ ಉದ್ಯಮಗಳಿಗೆ ಆರ್ಥಿಕ ನೆರವು ನೀಡಿ ಅವರನ್ನು ಸಬಲರನ್ನಾಗಿ ಮಾಡಬೇಕು’ ಎಂದು ಸ್ವದೇಶಿ ಜಾಗರಣ ಮಂಚ್‌ನ ರಾಷ್ಟ್ರೀಯ ಪರಿಷತ್‌ ಸದಸ್ಯ ಪ್ರೊ. ಬಿ.ಎಂ. ಕುಮಾರಸ್ವಾಮಿ ಹೇಳಿದರು.

ಬಸವೇಶ್ವರನಗರದ ಸಾಣೆಗುರುವನಹಳ್ಳಿಯಲ್ಲಿನ ನೇತಾಜಿ ಆಟದ ಮೈದಾನದಲ್ಲಿ ಆಯೋಜಿಸಿರುವ ಸ್ವದೇಶಿ ಮೇಳದಲ್ಲಿ ಗುರುವಾರ ಮಾತನಾಡಿದ ಅವರು, ‘ದೇಶದ ಆರ್ಥಿಕತೆಗೆ ಕಾರ್ಪೊರೇಟ್‌ ವಲಯದ ಕೊಡುಗೆ ದೊಡ್ಡದು ಎಂಬ ವಾದವಿದೆ. ಆದರೆ, ಇದು ಶುದ್ಧ ಸುಳ್ಳು. ಜಿಡಿಪಿಗೆ ಈ ವಲಯದ ಕೊಡುಗೆ ಶೇ 15 ಮಾತ್ರ. ಅದೇ ಸಣ್ಣ ಉದ್ದಿಮೆಗಳು (ಕಂಪನಿ ಅಲ್ಲದ ವಲಯ) ಜಿಡಿಪಿಗೆ ಶೇ 50ರಷ್ಟು ಕೊಡುಗೆ ನೀಡುತ್ತಿವೆ’ ಎಂದರು.

‘ಸಣ್ಣ ಉದ್ದಿಮೆಗಳ ಪೈಕಿಶೇ 70ರಷ್ಟು ನೋಂದಣಿ ಆಗಿಲ್ಲ. ಆದರೆ, ಈ ವಲಯ ಶೇ 90ರಷ್ಟು ಉದ್ಯೋಗಾವಕಾಶ ಸೃಷ್ಟಿಸುತ್ತಿದೆ. ಆದರೆ, ಕಾರ್ಪೊರೇಟ್‌ ವಲಯದಿಂದ ಆಗುತ್ತಿರುವ ಉದ್ಯೋಗ ಸೃಷ್ಟಿ ಶೇ 10 ಮಾತ್ರ’ ಎಂದು ಅವರು ಹೇಳಿದರು.

ADVERTISEMENT

‘ಮುಂದಿನ ಬಜೆಟ್‌ನಲ್ಲಿ ಸಣ್ಣ ಉದ್ದಿಮೆಗಳು ಮತ್ತು ಬೀದಿ ಬದಿ ವ್ಯಾಪಾರಿ ವಲಯಕ್ಕೆ ₹5 ಸಾವಿರ ಕೋಟಿ ಆವರ್ತ ನಿಧಿ ಇಡಬೇಕು’ ಎಂದು ಅವರು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.

200 ಮಳಿಗೆ: ದೇಸಿ ಉತ್ಪನ್ನಗಳು ಮತ್ತು ಸಾವಯವ ಕೃಷಿ ಪದಾರ್ಥಗಳು ಹಾಗೂ ದೇಸಿ ಉಡುಗೆಗಳು ಸೇರಿದಂತೆ ಕಿರು ಉದ್ಯಮಗಳು ಉತ್ಪಾದಿಸುವ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. 200 ಮಳಿಗೆಗಳನ್ನು ಹಾಕಲಾಗಿದ್ದು, ಐದು ದಿನಗಳವರೆಗೆ ಮೇಳ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.