ಬೆಂಗಳೂರು: ‘ಆಧುನಿಕ ಜೀವನ ವಿಧಾನ, ಪಾಶ್ವಾತ್ಯ ಆಹಾರ ಪದ್ಧತಿ ಹಾಗೂ ವಾಯುಮಾಲಿನ್ಯದಿಂದಾಗಿ ನಗರದಲ್ಲಿ ಪ್ರಾಸ್ಟೇಟ್(ಮೂತ್ರನಾಳ) ಕ್ಯಾನ್ಸರ್ ಹೆಚ್ಚಳವಾಗುತ್ತಿದೆ’ ಎಂದು ಕ್ಯಾನ್ಸರ್ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಗ್ಲೋಬಲ್ ಹೆಲ್ತ್ ಅಕಾಡೆಮಿ (ಜಿಎಚ್ಎ) ಸಹಯೋಗದಲ್ಲಿಸೊಸೈಟಿ ಆಫ್ ಜೆನಿಟೋರಿನರಿ ಆಂಕಾಲಾಜಿಸ್ಟ್ (ಎಸ್ಒಜಿಒ) ಆಯೋಜಿಸಿದ್ದ ಕ್ಯಾನ್ಸರ್ ತಜ್ಞರ‘ಸೊಗೊಕಾನ್- 2022’ ಸಮ್ಮೇಳನಕ್ಕೆನಗರದಲ್ಲಿ ಶನಿವಾರ ಚಾಲನೆ ದೊರೆಯಿತು.
ಎಚ್.ಸಿ.ಜಿ. ಕ್ಯಾನ್ಸರ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ರಘುನಾಥ್ ಎಸ್.ಕೆ., ‘ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ, ನಗರ ಪ್ರದೇಶದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ವೇಗವಾಗಿ ಹೆಚ್ಚಳವಾಗುತ್ತಿದೆ. ಪುರುಷರಲ್ಲಿ ಪತ್ತೆಯಾಗುವ ಕ್ಯಾನ್ಸರ್ಗಳಲ್ಲಿ ಇದು ಎರಡನೆಯ ಸ್ಥಾನದಲ್ಲಿದೆ.ಬಹುತೇಕ ಕ್ಯಾನ್ಸರ್ ಪೀಡಿತರು ರೋಗ ಉಲ್ಬಣಗೊಂಡ ಬಳಿಕ ಚಿಕಿತ್ಸೆಗೆ ಬರುತ್ತಾರೆ. ಕ್ಯಾನ್ಸರ್ ಇರುವುದು ಪ್ರಾಥಮಿಕ ಹಂತದಲ್ಲಿಯೇ ಪತ್ತೆಯಾದರೆ ಅಗತ್ಯ ಚಿಕಿತ್ಸೆ ನೀಡಿ, ಗುಣಪಡಿಸಬಹುದು’ ಎಂದರು.
ಸಮ್ಮೇಳನದ ಅಧ್ಯಕ್ಷ ಡಾ.ಶೇಖರ್ ಪಾಟೀಲ, ‘ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಗುರುತಿಸಿದಲ್ಲಿ ಚಿಕಿತ್ಸೆ ಸುಲಭವಾಗಲಿದೆ. ಸರ್ಕಾರವು ಕ್ಯಾನ್ಸರ್ ತಪಾಸಣೆಗೆ ಯೋಜನೆಗಳನ್ನು ರೂಪಿಸಬೇಕು. ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ರೋಗಿಗಳಿಗೆ ಚಿಕಿತ್ಸೆಗಳನ್ನು ಒದಗಿಸಬಹುದಾಗಿದೆ. ಆದರೆ, ಚಿಕಿತ್ಸಾ ವೆಚ್ಚ ಕಡಿತ ಮಾಡುವುದು ದೊಡ್ಡ ಸವಾಲಾಗಿದೆ. ಹಲವರು ವೈದ್ಯಕೀಯ ವಿಮೆ ಹೊಂದಿಲ್ಲವಾದ್ದರಿಂದ ಚಿಕಿತ್ಸಾ ವೆಚ್ಚ ಹೊರೆಯಾಗಲಿದೆ. ಇದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.