ADVERTISEMENT

ಮಾಧ್ಯಮಗಳ ಮೇಲಿನ ದಾಳಿಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2023, 20:05 IST
Last Updated 5 ಅಕ್ಟೋಬರ್ 2023, 20:05 IST
ಬೆಂಗಳೂರಿನಲ್ಲಿ ಗುರುವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಆನ್‌ಲೈನ್‌ ಸುದ್ದಿತಾಣ ನ್ಯೂಸ್‌ಕ್ಲಿಕ್‌ ಸಂಸ್ಥೆ ಮೇಲಿನ ದಾಳಿ, ಪತ್ರಕರ್ತರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನಲ್ಲಿ ಗುರುವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಆನ್‌ಲೈನ್‌ ಸುದ್ದಿತಾಣ ನ್ಯೂಸ್‌ಕ್ಲಿಕ್‌ ಸಂಸ್ಥೆ ಮೇಲಿನ ದಾಳಿ, ಪತ್ರಕರ್ತರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದರು.   

ಬೆಂಗಳೂರು: ಜನವಿರೋಧಿ ನೀತಿಗಳು, ಆಡಳಿತ ವೈಫಲ್ಯಗಳು ಸಾರ್ವಜನಿಕರಿಗೆ ತಿಳಿಯಬಾರದು ಎಂದೇ  ಕೇಂದ್ರ ಸರ್ಕಾರ ಮಾಧ್ಯಮಗಳ ಮೇಲೆ ದಾಳಿ ಮಾಡುತ್ತಿದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಆರೋಪಿಸಿದರು.

ಆನ್‌ಲೈನ್‌ ಸುದ್ದಿತಾಣ ನ್ಯೂಸ್‌ಕ್ಲಿಕ್‌ ಸಂಸ್ಥೆ ಮೇಲಿನ ದಾಳಿ, ಪತ್ರಕರ್ತರ ಬಂಧನ ಖಂಡಿಸಿ ಬಹುತ್ವ ಕರ್ನಾಟಕ, ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟಿಸ್‌ (ಪಿಯುಸಿಎಲ್‌), ಆಲ್ ಇಂಡಿಯಾ ಸ್ಟೂಡೆಂಟ್ಸ್‌ ಅಸೋಸಿಯೇಷನ್‌ (ಎಐಎಸ್‌ಎ), ಆಲ್‌ ಇಂಡಿಯಾ ಲಾಯರ್ಸ್‌ ಅಸೋಸಿಯೇಷನ್‌ ಫೋರಂ ಜಸ್ಟೀಸ್‌ (ಎಐಎಲ್‌ಎಜೆ), ಡಿಜಿಪಬ್ ಸಂಸ್ಥೆಗಳ ಸಹಯೋಗದಲ್ಲಿ  ಗುರುವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಸರ್ಕಾರದ ಧೋರಣೆಯನ್ನು ಖಂಡಿಸಿದರು.

ಪ್ರಬೀರ್ ಪುರಕಾಯಸ್ಥ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪ್ರಬೀರ್ ಅವರನ್ನು 1975ರ ತುರ್ತು ಪರಿಸ್ಥಿತಿ ಸಮಯದಲ್ಲೂ ಸರ್ಕಾರ ಬಂಧಿಸಿತ್ತು. ಇಂದು ದೇಶದಲ್ಲಿರುವ ಅಘೋಷಿತ ತುರ್ತು ಪರಿಸ್ಥಿತಿ ಸನ್ನಿವೇಶದಲ್ಲೂ ಬಂಧಿಸಲಾಗಿದೆ. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ದೂರಿದರು.

ADVERTISEMENT

ಬಂಧನಕ್ಕೆ ಒಳಗಾದವರಿಗೆ ಎಫ್‌ಐಆರ್‌ ಪ್ರತಿಯನ್ನೂ ನೀಡಿಲ್ಲ. ಎಫ್‌ಐಆರ್‌ ಮಾಹಿತಿ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋದರೂ, ದೆಹಲಿ ಪೊಲೀಸರು ವಿರೋಧಿಸಿದ್ದಾರೆ. ಆಂಧ್ರಪ್ರದೇಶದಲ್ಲೂ ಇಂತಹ ದಾಳಿಗಳು ನಡೆದಿವೆ. ವರದಿಗಾರರ ಬಳಿಯ ಮೂಲಗಳ ಮಾಹಿತಿ ಪಡೆಯುವುದು ಕಾನೂನು ಬಾಹಿರ. ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ದೂರಿದರು.

ಪಿಯುಸಿಎಲ್‌ ಅಧ್ಯಕ್ಷ ಅರವಿಂದ್‌ ನಾರಾಯಣ್‌, ವೆಲ್‌ಫೇರ್‌ ಪಾರ್ಟಿ ಆಫ್‌ ಇಂಡಿಯಾ ಅಧ್ಯಕ್ಷ ತಾಹಿರ್ ಹುಸೇನ್‌, ವಕೀಲರಾದ ಬಿ.ಟಿ.ವೆಂಕಟೇಶ್, ಅವನಿ ಚೋಕ್ಸಿ, ಪತ್ರಕರ್ತೆ ಸಿ.ಜಿ. ಮಂಜುಳಾ, ಪ್ರೆಸ್‌ಕ್ಲಬ್‌ ಆಫ್‌ ಇಂಡಿಯಾ ಮಾಜಿ ಅಧ್ಯಕ್ಷ ಆನಂದ್‌ ಸಹಾಯ್‌, ಬಹುತ್ವ ಕರ್ನಾಟಕದ ವಿನಯ್‌ ಶ್ರೀನಿವಾಸ, ಚಿಂತಕ ಜಿ.ರಾಮಕೃಷ್ಣ, ನಗರಗೆರೆ ರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.