ಬೆಂಗಳೂರು: ಇರಾನ್ ಮಹಿಳೆಯರ ಹೋರಾಟ ಬೆಂಬಲಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಬೆಂಗಳೂರು ಜಿಲ್ಲಾ ಸಮಿತಿ ಕಾರ್ಯಕರ್ತರು ಇಲ್ಲಿನ ಫ್ರೀಡಂ ಪಾರ್ಕ್ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಇರಾನಿನ ಮಹಿಳೆಯರು ಹಾಗೂ ಯುವಜನರು ನಡೆಸುತ್ತಿರುವ ಹೋರಾಟಕ್ಕೆ ಜಯ ದೊರೆಯಬೇಕು. ನಾವು ಅವರ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದೇವೆ. ಅವರೊಂದಿಗೆ ನಾವಿದ್ದೇವೆ’ ಎಂದು ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಎನ್.ಶ್ರೀರಾಂ ಅವರು ಹೇಳಿದರು.
‘ಪ್ರಜಾಸತ್ತಾತ್ಮಕ ಸರ್ಕಾರ ಸ್ಥಾಪಿಸುವುದಕ್ಕಾಗಿ ಹೋರಾಟ ನಡೆಯುತ್ತಿದೆ. ನೈತಿಕ ಪೊಲೀಸರು ಯುವತಿಯ ಬರ್ಬರವಾಗಿ ಕೊಲೆ ಮಾಡಿದ ಬಳಿಕ ಈ ಹೋರಾಟ ಆರಂಭವಾಗಿದೆ. ದಬ್ಬಾಳಿಕೆ ಪ್ರತಿರೋಧಿಸುವ ಧೀರ ಮಹಿಳೆಯರು ಈ ಚಳವಳಿ ಆರಂಭಿಸಿದ್ದಾರೆ. ಇಸ್ಲಾಮಿಕ್ ಮೂಲಭೂತವಾದಿಗಳಿಂದ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಶೋಷಣೆಗೆ ಒಳಗಾದ ಎಲ್ಲ ವರ್ಗದ ಜನರೂ ಒಂದುಗೂಡಿದ್ದಾರೆ. ಇರಾನ್ನಲ್ಲಿ ಮಹಿಳೆಯರಿಗೆ ನ್ಯಾಯ ಸಿಗಬೇಕಿದೆ’ ಎಂದು ಹೇಳಿದರು.
‘ಈ ಚಳವಳಿ ತಡೆಯಲು ಚಿತ್ರ ಹಿಂಸೆ, ಕೊಲೆ, ಮರಣ ದಂಡನೆ, ದೈಹಿಕ ಹಲ್ಲೆ ನಡೆಸಲಾಗುತ್ತಿದೆ. ಮಹಿಳೆಯರು, ಮಕ್ಕಳನ್ನು ಬಂಧಿಸಲಾಗುತ್ತಿದೆ. ಇದು ಅತ್ಯಂತ ಹೇಡಿತನ ಹಾಗೂ ಖಂಡನೀಯ ಕೃತ್ಯ. ಇಷ್ಟಾದರೂ ಮಹಿಳೆಯರು ಹಿಂಜರಿಯದೇ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟವು ಉಳಿದ ಎಲ್ಲ ಹೋರಾಟಕ್ಕೂ ಸ್ಫೂರ್ತಿ ಆಗಬೇಕು’ ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಎನ್.ರವಿ, ಎಸ್. ಶೋಭಾ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.