ADVERTISEMENT

ಪಿಆರ್‌ಆರ್‌: ಡಿಪಿಆರ್‌ ಪ್ರಕಟಣೆಗೆ ಒತ್ತಾಯ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 3:06 IST
Last Updated 10 ಸೆಪ್ಟೆಂಬರ್ 2020, 3:06 IST
ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ಸದಸ್ಯರು ಬಿಡಿಎ ಆಯುಕ್ತ ಎಚ್.ಆರ್. ಮಹದೇವ್ ಅವರಿಗೆ ಮನವಿ ಪತ್ರ ಸಲ್ಲಿಸಿದರು 
ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ಸದಸ್ಯರು ಬಿಡಿಎ ಆಯುಕ್ತ ಎಚ್.ಆರ್. ಮಹದೇವ್ ಅವರಿಗೆ ಮನವಿ ಪತ್ರ ಸಲ್ಲಿಸಿದರು    

ಬೆಂಗಳೂರು: ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ಸಾರ್ವಜನಿಕವಾಗಿ (ಆನ್‌ಲೈನ್‌ನಲ್ಲಿ) ಪ್ರಕಟಿಸಬೇಕು ಎಂದು ಒತ್ತಾಯಿಸಿ ಸಿಟಿಜನ್ಸ್‌ ಫಾರ್ ಬೆಂಗಳೂರು ಸಂಘಟನೆಯ ಸದಸ್ಯರು ಬಿಡಿಎ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

‘ಈ ಯೋಜನೆಗೆ ₹15 ಸಾವಿರ ಕೋಟಿಗೂ ಅಧಿಕ ವೆಚ್ಚವಾಗುತ್ತದೆ. ಅಲ್ಲದೆ, 33 ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಪರಿಸರದ ಮೇಲಿನ ಪರಿಣಾಮದ ವರದಿ (ಇಐಎ) ಹೇಳುತ್ತದೆ. ಇಂಥ ಯೋಜನೆಯ ಡಿಪಿಆರ್‌ ಈವರೆಗೆ ಸಾರ್ವಜನಿಕವಾಗಿ ಲಭ್ಯವಿಲ್ಲ. ಬಿಡಿಎ ವೆಬ್‌ಸೈಟ್‌ನಲ್ಲಿಯೂ ಇದನ್ನು ಪ್ರಕಟಿಸಿಲ್ಲ. ಯೋಜನೆಯ ನಿಖರ ಮಾಹಿತಿಯೇ ಇಲ್ಲದೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಏನು ಪ್ರಯೋಜನ’ ಎಂದು ಸಂಘಟನೆಯ ಸದಸ್ಯರು ಬಿಡಿಎ ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಹೊಸ ವಿನ್ಯಾಸ ಅಥವಾ ಅಲೈನ್‌ಮೆಂಟ್‌ ಬದಲಾಯಿಸಲಾಗುತ್ತಿದ್ದು, 700 ಎಕರೆಯನ್ನು ಬಿಡಿಎ ಸ್ವಾಧೀನ ಪಡಿಸಿಕೊಳ್ಳುತ್ತಿದೆ. ಇದಕ್ಕಾಗಿ ಪರಿಸರದ ಮೇಲಿನ ಪರಿಣಾಮಗಳ ವರದಿ (ಇಐಎ) ಬದಲಾಗಲಿದೆ. ಇಐಎ ಬದಲಾದ ಮೇಲೆ, ಡಿಪಿಆರ್ ಕೂಡ ಬದಲಾಗುತ್ತದೆ. ಹೊಸ ಡಿಪಿಆರ್ ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೆ.23ರಂದು ವೆಬಿನಾರ್‌ನಲ್ಲಿ ಈ ಕುರಿತು ಸಾರ್ವಜನಿಕ ಸಭೆ ನಡೆಸಲಿದೆ.

ಬಿಡಿಎ ಆಯುಕ್ತ ಎಚ್.ಆರ್. ಮಹದೇವ್ ಅವರನ್ನು ಭೇಟಿಯಾದ ಸಂಘಟನೆಯ ಸದಸ್ಯರು, ಈ ಕುರಿತು ಮನವಿ ಪತ್ರ ಸಲ್ಲಿಸಿದರು.

‘ಡಿಪಿಆರ್ ಇನ್ನೂ ಅಂತಿಮಗೊಂಡಿಲ್ಲ. ವಿನ್ಯಾಸ ಬದಲಾವಣೆಯಿಂದ ಇಐಎ ಬದಲಾಗಲಿದೆ. ಈ ಕುರಿತು ಚರ್ಚಿಸಲು ಸೆ.23ಕ್ಕೆ ಸಾರ್ವಜನಿಕ ಸಭೆ ಕರೆಯಲಾಗಿದೆ. ವಿನ್ಯಾಸ ಅಂತಿಮವಾದ ನಂತರ ಮತ್ತೊಮ್ಮೆ ಸಾರ್ವಜನಿಕ ಸಭೆ ಕರೆಯಲಾಗುವುದು. ಆದರೆ, ಡಿಪಿಆರ್‌ ಅನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲು ಸಾಧ್ಯವಿಲ್ಲ. ಕಾನೂನಾತ್ಮಕವಾಗಿ ಇದನ್ನು ಕಡ್ಡಾಯ ಮಾಡಿದರೆ ಮಾತ್ರ ಪ್ರಕಟಿಸಲಾಗುವುದು’ ಎಂದು ಮಹದೇವ್ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.