ಕೆ.ಆರ್.ಪುರ: ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪಿಆರ್ಆರ್) ನಿರ್ಮಾಣಕ್ಕಾಗಿ ಕೃಷಿ ಜಮೀನು ಸ್ವಾಧೀನಪಡಿಸಿಕೊಂಡು 20 ವರ್ಷಗಳು ಕಳೆದರೂ ರೈತರಿಗೆ ಯಾವುದೇ ಪರಿಹಾರ ನೀಡದೆ ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ಆರೋಪಿಸಿ ಹಿಂಡರಹಳ್ಳಿ ಗ್ರಾಮದ ರೈತರು ರಸ್ತೆ ತಡೆ ಮಾಡಿ, ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಬಿಡಿಎ ಅಧಿಕಾರಿಗಳು ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಹಿರಂಡಹಳ್ಳಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಜಮೀನನ್ನು ಪರಿಶೀಲಿಸಿ, ಪರಿಹಾರಕ್ಕೆ ಸಂಬಂಧಿಸಿದಂತೆ ರೈತರೊಂದಿಗೆ ಚರ್ಚಿಸಲು ಮುಂದಾದರು. ಸಭೆಯಲ್ಲಿ ಒಮ್ಮತ ಮೂಡದ ಕಾರಣ ರೈತರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ, ಬಿದರಹಳ್ಳಿಯಿಂದ ಅವಲಹಳ್ಳಿ ಕಡೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವವಹಿಸಿದ್ದ ರೈತ ಮುಖಂಡ ಎಚ್.ಎನ್.ಜಗನ್ನಾಥ್ ಮಾತನಾಡಿ, ‘ತುಮಕೂರಿನಿಂದ ಹೊಸೂರಿಗೆ ಸಂಪರ್ಕ ಕಲ್ಪಿಸುವ ಪಿಆರ್ಆರ್ ನಿರ್ಮಾಣಕ್ಕೆ 2007ರಲ್ಲಿ ಹಿರಂಡಳ್ಳಿ ಗ್ರಾಮದ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಪರಿಹಾರ ನೀಡಿರಲಿಲ್ಲ. ಈಗ 20 ವರ್ಷಗಳ ಹಿಂದಿನ ದರವನ್ನು ಪರಿಹಾರವಾಗಿ ಕೊಡುತ್ತೇವೆ ಎಂದು ಹೇಳಿದರು. ನಾವು ಒಪ್ಪಲಿಲ್ಲ. ಈಗಿನ ಮಾರುಕಟ್ಟೆ ದರ ನೀಡಿದರೆ ಮಾತ್ರ ಜಮೀನು ಕೊಡುತ್ತೇವೆ ಎಂದು ಒತ್ತಾಯಿಸಿದ್ದೇವೆ’ ಎಂದು ಹೇಳಿದರು.
‘ಯುಪಿಎ ಸರ್ಕಾರ ಜಾರಿಗೊಳಿಸಿರುವ 2013ರ ಭೂ ಸ್ವಾಧೀನ ಮತ್ತು ಪರಿಹಾರ ಕಾಯ್ದೆ ಪ್ರಕಾರ ಮಾರುಕಟ್ಟೆ ಬೆಲೆಯ ಮೂರು ಪಟ್ಟು ಪರಿಹಾರ ನೀಡಿದರೆ ಮಾತ್ರ ಜಮೀನು ಕೊಡುತ್ತೇವೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ರೈತ ಎಚ್.ಜಿ.ಕೆಂಪರಾಜು ಹೇಳಿದರು.
ಪ್ರತಿಭಟನೆಯಲ್ಲಿ ಗ್ರಾಮದ ರೈತ ಮುಖಂಡರಾದ ಎಚ್.ಎನ್.ಮಂಜುನಾಥ್, ಎಚ್.ಎಂ.ರಮೇಶ್, ಎಚ್.ನಾರಾಯಣಸ್ವಾಮಿ, ಎಚ್.ಎಂ.ಕೃಷ್ಣಪ್ಪ, ಎಚ್.ಎನ್.ರಾಮಾಂಜಿನಪ್ಪ, ಎಚ್.ಎ.ಮುನಿರಾಜು, ಮುನಿಸ್ವಾಮಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.