ADVERTISEMENT

ಬಡ್ತಿ ಸಿಕ್ಕರೂ ಸಿಗದ ಸ್ಥಳ

​ಪ್ರಜಾವಾಣಿ ವಾರ್ತೆ
Published 21 ಮೇ 2019, 19:01 IST
Last Updated 21 ಮೇ 2019, 19:01 IST
   

ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಹಿಂಬಡ್ತಿಗೊಂಡಿದ್ದ ನೌಕರರಿಗೆ ಮುಂಬಡ್ತಿ ನೀಡಿ, ಸ್ಥಳ ನಿಯೋಜಿಸಿ ವಿವಿಧ ಇಲಾಖೆಗಳು ಆದೇಶ ಹೊರಡಿಸಿವೆ. ಆದರೆ ಲೋಕೋಪಯೋಗಿ ಇಲಾಖೆ ಮುಂಬಡ್ತಿ ನೀಡಿದ್ದರೂ, ಸ್ಥಳ ನಿಯೋಜನೆ ಮಾಡಿಲ್ಲ.

ಹಿಂಬಡ್ತಿ ಹೊಂದಿದ್ದ ಪರಿಶಿಷ್ಟ ಜಾತಿ, ವರ್ಗದ ಲೋಕೋಪಯೋಗಿ ಇಲಾಖೆಯ 347 ಎಂಜಿನಿಯರ್‌ಗಳಿಗೆ ಮುಂಬಡ್ತಿ ನೀಡಲಾಗಿದೆ. ಸ್ಥಳ ನಿಯೋಜನೆ ಮಾಡದಿರುವುದು ವಿವಾದಕ್ಕೆ ಒಳಗಾಗಿದೆ. ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದ್ದರೂ ನಿಯೋಜನೆ ಮಾಡುತ್ತಿಲ್ಲ ಎಂದು ಆರೋಪಿಸಲಾಗಿದೆ.

‘ಲೋಕೋಪಯೋಗಿ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದ್ದರೂ ಸ್ಥಳ ತೋರಿಸದೆ ತಡ ಮಾಡಲಾಗುತ್ತಿದೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿ ಸಮಸ್ಯೆ ಬಗೆಹರಿಸುವಂತೆ ಕೋರಿ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಬಡ್ತಿ ಮೀಸಲಾತಿ ಹೋರಾಟ ಸಮನ್ವಯ ಸಮಿತಿ ಕಾನೂನು ಸಲಹೆಗಾರ ಚಂದ್ರಶೇಖರಯ್ಯ ತಿಳಿಸಿದರು.

ADVERTISEMENT

‘ಎಲ್ಲೆಲ್ಲಿ ಹುದ್ದೆಗಳು ಖಾಲಿ ಇವೆ ಎಂಬುದನ್ನು ನೋಡಿಕೊಂಡು ಶೀಘ್ರ ನಿಯೋಜಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣಾರೆಡ್ಡಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.