ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ಮತ್ತು ನೌಕರರ ವಿರುದ್ಧ ತನಿಖೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ತ್ವರಿತವಾಗಿ ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
‘ಪ್ರಜಾವಾಣಿ’ಯ ಮಂಗಳವಾರದ ಸಂಚಿಕೆ ಯಲ್ಲಿ ಪ್ರಕಟವಾದ ‘ಬಿಡಿಎ ಅಕ್ರಮ: ತನಿಖೆಗೆ ಅಡ್ಡಗಾಲು’ ವಿಶೇಷ ವರದಿ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ಬಿಡಿಎ ಕಚೇರಿಗಳ ಮೇಲೆ ದಾಳಿ ಮಾಡಿದ್ದ ಎಸಿಬಿ ಅಧಿಕಾರಿಗಳು, ಎಫ್ಐಆರ್ ದಾಖಲಿಸಲು ಅನುಮತಿ ಕೋರಿ ದ್ದಾರೆ. ಈ ಪ್ರಸ್ತಾವಗಳನ್ನು ಬಿಡಿಎ ಆಂತರಿಕ ಜಾಗೃತ ಕೋಶಕ್ಕೆ ಕಳುಹಿಸಿದ್ದು, ವರದಿ ಬಂದ ತಕ್ಷಣ ತಡಮಾಡದೇ ತನಿಖೆಗೆ ಅನುಮತಿ ನೀಡಲಾ ಗುವುದು’ ಎಂದು ಹೇಳಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು, ‘ನವೆಂಬರ್ ತಿಂಗಳಿನಲ್ಲಿ ಬಿಡಿಎ ಕಚೇರಿ ಮೇಲೆ ನಡೆದ ದಾಳಿಯ ಆಧಾರದಲ್ಲಿ ಪ್ರಕ ರಣ ದಾಖಲಿಸಲು ಅನುಮತಿ ಕೋರಿ ಡಿಸೆಂಬರ್ ಮೊದಲ ವಾರ ತನಿಖಾಧಿಕಾರಿಗಳು ಪತ್ರ ಬರೆದಿದ್ದರು. ಆಂತರಿಕ ಪರಿಶೀಲನೆಗಾಗಿ ಈ ಪ್ರಕರಣಗಳನ್ನು ಬಿಡಿಎ ಜಾಗೃತ ಕೋಶ ಹಾಗೂ ಆಯುಕ್ತರಿಗೆ ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಬಿಡಿಎ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ತನಿಖೆಗೆ ಅನುಮತಿ ಕೋರಿ ಎಸಿಬಿ ಸಲ್ಲಿಸಿರುವ 47 ಪ್ರಸ್ತಾವಗಳು ಬಾಕಿ ಇವೆ. ಬಿಡಿಎ ನೌಕರರ ವಿರುದ್ಧ ಪ್ರಾಧಿಕಾರದ ಆಯುಕ್ತರು ಮತ್ತು ಎರವಲು ಸೇವೆಯ ಮೇಲೆ ನಿಯೋಜನೆಯಲ್ಲಿರುವ ನೌಕರರ ವಿರುದ್ಧ ಸರ್ಕಾರದ ಹಂತದಲ್ಲಿ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.