ADVERTISEMENT

ತಂಪಾದ ವಾತಾವರಣ: ಮುದ ನೀಡಿದ ಮಳೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 19:57 IST
Last Updated 6 ಜನವರಿ 2021, 19:57 IST
ನಗರದಲ್ಲಿ ಬುಧವಾರ ಸುರಿದ ಮಳೆಯ ನಡುವೆ ವಾಹನ ಸವಾರರು ಕೊಡೆ ಹಿಡಿದು ಸಾಗುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ
ನಗರದಲ್ಲಿ ಬುಧವಾರ ಸುರಿದ ಮಳೆಯ ನಡುವೆ ವಾಹನ ಸವಾರರು ಕೊಡೆ ಹಿಡಿದು ಸಾಗುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಜನವರಿಯಲ್ಲಿಯೂ ಜೂನ್‌ನಲ್ಲಿದ್ದಂತೆ ಮಳೆಯಾಗುತ್ತಿದ್ದು, ಬುಧವಾರವೂ ನಗರದಲ್ಲಿ ವರುಣನ ದರ್ಶನವಾಯಿತು. ಇಡೀ ದಿನ ತಂಪಾದ ವಾತಾವರಣ ಇತ್ತು.

ಮಿಂಚು–ಗುಡುಗುಗಳ ಆರ್ಭಟವಿಲ್ಲದ, ದೊಡ್ಡದಾಗಿ ಹರಿಯುವ ಕೊಳಚೆ ನೀರಿನ ಕಿರಿಕಿರಿಯಿಲ್ಲದ ವಾತಾವರಣವನ್ನು ಜನರು ಆನಂದಿಸಿದರು. ಪೂರ್ತಿ ದಿನ ಮೋಡ ಕವಿದ ವಾತಾವರಣವಿದ್ದು, ಚಳಿಯೂ ಹೆಚ್ಚಾಗಿತ್ತು. ಬೆಳಿಗ್ಗೆಯಿಂದಲೇ ಜಿಟಿಜಿಟಿಯಾಗಿ ಸುರಿದ ಮಳೆ, ಸಂಜೆ ಹೊತ್ತಿಗೆ ಬಿರುಸುಗೊಂಡು ಕೆಲವು ಕಡೆಗಳಲ್ಲಿ ಜೋರಾಗಿ ಸುರಿಯಿತು.

ಬೇರೆ ವಲಯಗಳಿಗೆ ಹೋಲಿಸಿದರೆ, ಬೊಮ್ಮನಹಳ್ಳಿ ಹಾಗೂ ಪಶ್ಚಿಮ ವಲಯದಲ್ಲಿ ಅಧಿಕ ಮಳೆ ಸುರಿಯಿತು. ‘ಬಂಗಾಳಕೊಲ್ಲಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರಗೊಂಡ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆ ಚುರುಕಾಗಿದೆ’ ಎಂದು ರಾಜ್ಯ ಹವಾಮಾನ ಇಲಾಖೆ ಹೇಳಿದೆ.

ADVERTISEMENT

ಕೆ.ಆರ್. ಮಾರುಕಟ್ಟೆ, ಶಾಂತಿನಗರ, ರಾಜಾಜಿನಗರ, ಯಶವಂತಪುರ, ದೀಪಾಂಜಲಿನಗರ, ಬಸವನಗುಡಿ, ಮಲ್ಲೇಶ್ವರ, ಶೇಷಾದ್ರಿಪುರ, ಆರ್.ಆರ್.ನಗರ, ಹೆಬ್ಬಾಳ, ಬೊಮ್ಮನಹಳ್ಳಿ, ವಿದ್ಯಾರಣ್ಯಪುರ ಸೇರಿದಂತೆ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬಿದ್ದಿದೆ. ನಗರದಲ್ಲಿ ಸರಾಸರಿ 7.34 ಮಿ.ಮೀ. ಮಳೆ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ.

‘ದಿನವಿಡೀ ಮಳೆ ಸುರಿದರೂ ನಗರದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಸಂಚಾರ ದಟ್ಟಣೆ:

ಕೆ.ಆರ್. ವೃತ್ತ, ನೃಪತುಂಗ ರಸ್ತೆ, ಮೆಜೆಸ್ಟಿಕ್ ಮತ್ತು ಸುತ್ತಮುತ್ತಲಿನ ರಸ್ತೆಗಳು, ಕೆ.ಆರ್. ಮಾರುಕಟ್ಟೆ, ಹಡ್ಸನ್ ವೃತ್ತ, ರೆಸಿಡೆನ್ಸಿ ರಸ್ತೆ, ಹೆಬ್ಬಾಳ ಜಂಕ್ಷನ್, ಆನಂದರಾವ್ ವೃತ್ತ, ಮೈಸೂರು ರಸ್ತೆ ಸೇರಿದಂತೆ ಮುಖ್ಯ ರಸ್ತೆ ಹಾಗೂ ವೃತ್ತಗಳಲ್ಲಿ ಸಂಜೆಯ ವೇಳೆ ಸ್ವಲ್ಪ ಹೊತ್ತು ದಟ್ಟಣೆ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.