ಬೆಂಗಳೂರು: ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ನಡುರಸ್ತೆಯಲ್ಲೇ ಪತ್ನಿಯನ್ನು ಬೆನ್ನಟ್ಟಿ ಚಾಕುವಿನಿಂದ ಇರಿದು ಕೊಂದು ಪೊಲೀಸರಿಗೆ ಶರಣಾಗಿರುವ ಆರೋಪಿ ಮಂಜುನಾಥ್, ಕೃತ್ಯ ಸಂಬಂಧ ಹೇಳಿಕೆ ನೀಡಿದ್ದಾನೆ.
‘ಮಹಿಳೆಯೊಬ್ಬರ ಜೊತೆಗೆ ಸಲುಗೆ ಇಟ್ಟುಕೊಂಡಿದ್ದೆ. ಅದನ್ನು ಪ್ರಶ್ನಿಸಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಕ್ಕೆ ಪತ್ನಿ ಹೇಮಾಳನ್ನು (32) ಕೊಲೆ ಮಾಡಿದೆ’ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
‘ಮಂಗಳವಾರ (ಜೂನ್ 30) ಸಂಜೆ ಪತ್ನಿ ಗಲಾಟೆ ಮಾಡಿದ್ದಳು. ಆಗ ಮನೆಯಿಂದ ಹೊರ ಹೋಗಿದ್ದೆ. ಮದ್ಯ ಕುಡಿದು ರಾತ್ರಿ ಮನೆಗೆ ವಾಪಸು ಬಂದಿದ್ದೆ. ಪತ್ನಿ ಹಾಗೂ ಆಕೆಯ ಸಹೋದರ ಮನೆಯಲ್ಲಿದ್ದರು. ಪುನಃ ಜಗಳವಾಯಿತು. ನನ್ನ ವಿರುದ್ಧ ದೂರು ನೀಡಲೆಂದು ಅವರಿಬ್ಬರು ಠಾಣೆಯತ್ತ ಹೊರಟಿದ್ದರು.’
‘ರಸ್ತೆಯಲ್ಲೇ ಪತ್ನಿಯನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿದೆ. ತೀವ್ರ ಗಾಯಗೊಂಡು ಬಿದ್ದಿದ್ದ ಆಕೆ ತಲೆ ಮೇಲೆ ಕಲ್ಲು ಎತ್ತಿಹಾಕಿದೆ’ ಎಂದೂ ಆರೋಪಿ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಮದ್ಯ ಕುಡಿದು ಬಂದು ಜಗಳ: ‘ಮದ್ಯವ್ಯಸನಿಯಾದ ಆರೋಪಿ ಮಂಜುನಾಥ್, ನಿತ್ಯವೂ ಮದ್ಯ ಕುಡಿದು ಬಂದು ಪತ್ನಿ ಜೊತೆ ಗಲಾಟೆ ಮಾಡುತ್ತಿದ್ದ. ಮದ್ಯ ಖರೀದಿಗಾಗಿ ಹಲವೆಡೆ ಸಾಲ ಮಾಡಿಕೊಂಡಿದ್ದ. ಮನೆ ಖರ್ಚಿಗೂ ಆರೋಪಿ ಹಣ ಕೊಡುತ್ತಿರಲಿಲ್ಲ. ಬೇರೆ ಮಹಿಳೆಯೊಂದಿಗೆ ಸಲುಗೆ ಇಟ್ಟುಕೊಂಡು ಆಕೆಯ ಮನೆಗೂ ಆಗಾಗ ಹೋಗಿ ಬರುತ್ತಿದ್ದ. ಇದು ಹೇಮಾ ಅವರಿಗೆ ಗೊತ್ತಾಗಿತ್ತು. ಆತನಿಗೆ ವಿಚ್ಛೇದನ ನೀಡಲು ಪತ್ನಿ ತೀರ್ಮಾನಿಸಿದ್ದರು’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.